ಬರ್ಧಮಾನ್ (ಪಶ್ಚಿಮ ಬಂಗಾಳ): ವೈವಿಧ್ಯತೆಯಲ್ಲಿಯೇ ಏಕತೆಯಿದೆ ಎಂದು ನಂಬುವ ಜವಾಬ್ದಾರಿಯುತ ಸಮಾಜವಾಗಿರುವ ಹಿಂದೂ ಸಮುದಾಯವನ್ನು ಒಗ್ಗೂಡಿಸುವುದು ಅಗತ್ಯವಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದರು.
ಬರ್ಧಮಾನ್ನ ಎಸ್ಎಐ ಮೈದಾನದಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ಹಿಂದೂ ಸಮಾಜದ ಬಗ್ಗೆಯೇ ಏಕೆ ಮಾತನಾಡುತ್ತೇವೆ ಎಂದು ಜನ ಆಗಾಗ ನಮ್ಮನ್ನು ಪ್ರಶ್ನಿಸುತ್ತಾರೆ. ಹಿಂದೂ ಸಮಾಜವು ದೇಶದ ಜವಾಬ್ದಾರಿಯುತ ಸಮಾಜವಾಗಿರುವುದೇ ಇದಕ್ಕೆ ಕಾರಣ" ಎಂದು ಹೇಳಿದರು.
"ಇಂದು ಇಲ್ಲಿ ನಡೆಯುತ್ತಿರುವುದು ಅಂಥ ವಿಶೇಷ ಸಮಾರಂಭವೇನಲ್ಲ. ಸಂಘದ ಬಗ್ಗೆ ಮಾಹಿತಿ ಇಲ್ಲದವರು ಸಂಘದ ಉದ್ದೇಶವೇನು ಎಂದು ಆಶ್ಚರ್ಯ ಪಡುತ್ತಾರೆ. ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮಾಜವಾಗಿರುವುದರಿಂದ ಆ ಸಮಾಜವನ್ನು ಸಂಘಟಿಸಲು ಪ್ರಯತ್ನಿಸುವುದು ಆರ್ಎಸ್ಎಸ್ನ ಉದ್ದೇಶವಾಗಿದೆ ಎಂಬುದೇ ನನ್ನ ಉತ್ತರವಾಗಿದೆ" ಎಂದು ಭಾಗವತ್ ತಿಳಿಸಿದರು.
ವಿಶ್ವದ ವೈವಿಧ್ಯತೆಯನ್ನು ಒಪ್ಪಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು.
"ಭಾರತವು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ; ಭಾರತಕ್ಕೆ ಒಂದು ಸ್ವರೂಪವಿದೆ. ಭಾರತದ ಮೌಲ್ಯಗಳೊಂದಿಗೆ ಬದುಕಲು ಸಾಧ್ಯವಾಗದ ಕೆಲವರು ಪ್ರತ್ಯೇಕ ದೇಶವನ್ನು ರಚಿಸಿಕೊಂಡರು. ಆದರೆ ಇಲ್ಲಿಯೇ ಉಳಿದವರು ಸ್ವಾಭಾವಿಕವಾಗಿ ಭಾರತದ ಈ ಸಾರವನ್ನು ಸ್ವೀಕರಿಸಿದರು. ಹಾಗಾದರೆ ಈ ಸಾರವೇನು? ವಿಶ್ವದ ವೈವಿಧ್ಯತೆಯನ್ನು ಸ್ವೀಕರಿಸುವ ಮೂಲಕ ಅಭಿವೃದ್ಧಿ ಹೊಂದುವ ಹಿಂದೂ ಸಮಾಜವೇ ಆ ಸಾರವಾಗಿದೆ. ನಾವು 'ವೈವಿಧ್ಯತೆಯಲ್ಲಿ ಏಕತೆ' ಎಂದು ಹೇಳುತ್ತೇವೆ. ಆದರೆ ವೈವಿಧ್ಯತೆಯೇ ಏಕತೆ ಎಂದು ಹಿಂದೂ ಸಮಾಜ ಅರ್ಥಮಾಡಿಕೊಂಡಿದೆ" ಎಂದು ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ನುಡಿದರು.
ಭಾರತದಲ್ಲಿ, ಯಾರೂ ಚಕ್ರವರ್ತಿಗಳು ಮತ್ತು ಮಹಾರಾಜರನ್ನು ನೆನಪಿಸಿಕೊಳ್ಳುವುದಿಲ್ಲ, ಬದಲಿಗೆ ತನ್ನ ತಂದೆಗೆ ನೀಡಿದ ಭರವಸೆಯನ್ನು ಪೂರೈಸಲು 14 ವರ್ಷಗಳ ಕಾಲ ವನವಾಸಕ್ಕೆ ಹೋದ ರಾಜನನ್ನು ನೆನಪಿಸಿಕೊಳ್ಳುತ್ತಾರೆ ಎಂದು ಭಗವಾನ್ ರಾಮನನ್ನು ಉಲ್ಲೇಖಿಸಿದರು. ತನ್ನ ಸಹೋದರನ ಪಾದರಕ್ಷೆಗಳನ್ನು ಸಿಂಹಾಸನದ ಮೇಲೆ ಇರಿಸಿದ ಮತ್ತು ಹಿಂದಿರುಗಿದ ನಂತರ ರಾಜ್ಯವನ್ನು ಹಸ್ತಾಂತರಿಸಿದ ವ್ಯಕ್ತಿಯನ್ನು ನೆನಪಿಸಿಕೊಳ್ಳುತ್ತಾರೆ ಎಂದು ಭರತ ರಾಜನನ್ನು ಉಲ್ಲೇಖಿಸಿ ಭಾಗವತ್ ಹೇಳಿದರು.
"ಈ ಗುಣಲಕ್ಷಣಗಳೇ ಭಾರತವನ್ನು ವ್ಯಾಖ್ಯಾನಿಸುತ್ತವೆ. ಈ ಮೌಲ್ಯಗಳನ್ನು ಅನುಸರಿಸುವವರು ಹಿಂದೂಗಳು ಮತ್ತು ಅವರು ಇಡೀ ದೇಶದ ವೈವಿಧ್ಯತೆಯನ್ನು ಒಗ್ಗೂಡಿಸುತ್ತಾರೆ. ನಾವು ಇತರರನ್ನು ನೋಯಿಸುವ ಕೆಲಸಗಳನ್ನು ಮಾಡಲ್ಲ. ಆಡಳಿತಗಾರರು ಮತ್ತು ಮುಖಂಡರು ತಮ್ಮ ಕೆಲಸವನ್ನು ಮಾಡುತ್ತಾರೆ. ಆದರೆ ಸಮಾಜವು ರಾಷ್ಟ್ರದ ಸೇವೆ ಮಾಡಲು ಮುಂದೆ ಬರಬೇಕು" ಎಂದು ಅವರು ವಿವರಿಸಿದರು.
ಹಿಂದೂ ಏಕತೆಯ ಅಗತ್ಯವನ್ನು ಪುನರುಚ್ಚರಿಸಿದ ಭಾಗವತ್, ಒಳ್ಳೆಯ ಸಮಯದಲ್ಲೂ ಸವಾಲುಗಳು ನಿರಂತರವಾಗಿ ಇದ್ದೇ ಇರುತ್ತವೆ ಎಂದರು.
"ಸಮಸ್ಯೆಯ ಸ್ವರೂಪ ಎಂಥದು ಎಂಬುದು ಅಪ್ರಸ್ತುತವಾಗಿದೆ; ಆದರೆ ಆ ಸಮಸ್ಯೆಗಳು ಬಂದಾಗ ಅವುಗಳನ್ನು ಎದುರಿಸಲು ನಾವು ಎಷ್ಟು ಸಿದ್ಧರಾಗಿದ್ದೇವೆ ಎಂಬುದು ಮುಖ್ಯ" ಎಂದು ಅವರು ಹೇಳಿದರು.
ಆರಂಭದಲ್ಲಿ ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಬಂಗಾಳ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ನಂತರ ಕೋಲ್ಕತಾ ಹೈಕೋರ್ಟ್ ನ ಅನುಮತಿಯ ನಂತರ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ : 'ತ್ರಿಭಾಷಾ ಸೂತ್ರಕ್ಕೆ ಸಾಂವಿಧಾನಿಕ ಮಾನ್ಯತೆಯಿಲ್ಲ'; ಎನ್ಇಪಿ ತಿರಸ್ಕರಿಸಿದ ಕ್ರಮ ಸಮರ್ಥಿಸಿಕೊಂಡ ಸಿಎಂ ಸ್ಟಾಲಿನ್ - TRILINGUAL POLICY