ಕೋಟಾ (ರಾಜಸ್ಥಾನ): ವಿದ್ಯುತ್ ಪ್ರವಹಿಸಿ 15 ಮಕ್ಕಳು ಗಾಯಗೊಂಡಿರುವ ಘಟನೆ ಕುನ್ಹಾಡಿಯಲ್ಲಿ ನಡೆಯುತ್ತಿದ್ದ ಶಿವನ ಮೆರವಣಿಗೆ ವೇಳೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಎಂಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಮಕ್ಕಳ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯ ಇಂಧನ ಸಚಿವ ಹೀರಾಲಾಲ್ ನಗರ್ ಅವರು ಗಾಯಗೊಂಡ ಮಕ್ಕಳನ್ನು ಭೇಟಿ ಮಾಡಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದಾರೆ. ಐಜಿ ರವಿದತ್ ಗೌರ್, ಜಿಲ್ಲಾಧಿಕಾರಿ ಡಾ.ರವೀಂದ್ರ ಗೋಸ್ವಾಮಿ, ಎಸ್ಪಿ ಡಾ.ಅಮೃತ್ ದುಹಾನ್ ಸೇರಿದಂತೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಫಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
ಕುನ್ಹಾಡಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ರಯೀಸ್ ಅಹ್ಮದ್ ಈ ಬಗ್ಗೆ ಮಾತನಾಡಿದ್ದಾರೆ. "ಉಷ್ಣ ವಿದ್ಯುತ್ ಸ್ಥಾವರದ ಸಮೀಪ ಇರುವ ಕಾಳಿ ಬಸ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿ ಜನರು ಮಕ್ಕಳೊಂದಿಗೆ ಶಿವನ ಮೆರವಣಿಗೆಯನ್ನು ನಡೆಸುತ್ತಿದ್ದರು. ಮಕ್ಕಳ ಕೈಯಲ್ಲಿ ಧ್ವಜವಿತ್ತು, ಅದು ಆಕಸ್ಮಿಕವಾಗಿ ಅಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ಈ ವೇಳೆ ಮಕ್ಕಳಿಗೆ ವಿದ್ಯುತ್ ಪ್ರವಹಿಸಿ ಕೆಲ ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ 15 ಮಕ್ಕಳು ಗಾಯಗೊಂಡಿದ್ದಾರೆ. ಈ ಪೈಕಿ ಶಗುನ್ ಅವರ 13 ವರ್ಷದ ಮಗ ಮಂಗಿಲಾಲ್ ಗಂಭೀರವಾಗಿ ಗಾಯಗೊಂಡಿದ್ದು, ಸಿಪಿಆರ್ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಕ್ಕಳನ್ನು ಭೇಟಿ ಮಾಡಿದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಸರಿಯಾದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
ಇದನ್ನೂ ಓದಿ: ಜಗಳದಿಂದ ಕೋಪಗೊಂಡು ಬಾವಿಗೆ ಹಾರಿದ ಪತಿ: ತಾನೂ ಜಿಗಿದು ಗಂಡನ ರಕ್ಷಿಸಿದ ಪತ್ನಿ