ರಾಜನಂದಗಾಂವ್/ರಾಯಪುರ: ಖ್ಯಾತ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ ಭಾನುವಾರ ಜಿನೈಕ್ಯರಾಗಿದ್ದಾರೆ. ಛತ್ತೀಸ್ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರ್ಗಢ್ನಲ್ಲಿರುವ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ್ದಾರೆ.
ಆಚಾರ್ಯ ವಿದ್ಯಾಸಾಗರ ಮಹಾರಾಜರು ಕಳೆದ ಆರು ತಿಂಗಳಿಂದ ಡೊಂಗರಗಢದ ತೀರ್ಥದಲ್ಲಿ ತಂಗಿದ್ದರು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಕಳೆದ ಮೂರು ದಿನಗಳಿಂದ ಅವರು ಸ್ವಯಂಪ್ರೇರಣೆಯಿಂದ ಆಮರಣಾಂತ ಉಪವಾಸ ಮಾಡುವ ಧಾರ್ಮಿಕ ಆಚರಣೆಯಾದ ಸಲ್ಲೇಖನವನ್ನು ಕೈಗೊಂಡು ಆಹಾರ ಸೇವನೆ ತ್ಯಜಿಸಿದ್ದರು. ಜೈನ ಧರ್ಮದ ಪ್ರಕಾರ, ಇದು ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ತೆಗೆದುಕೊಳ್ಳಲಾದ ಪ್ರತಿಜ್ಞೆಯಾಗಿದೆ ಎಂದು ಡೊಂಗರಗಢದ ತೀರ್ಥದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಚಾರ್ಯ ವಿದ್ಯಾಸಾಗರ ಮಹಾರಾಜರು ಚಂದ್ರಗಿರಿ ತೀರ್ಥದಲ್ಲಿ ಬೆಳಗಿನ ಜಾವ 2.35ಕ್ಕೆ ಸಲ್ಲೇಖನ ಮೂಲಕ ದೇಹ ತ್ಯಾಗ ಮಾಡಿದರು. ಅಗಲಿದ ಮುನಿಗಳಿಗೆ ಮಧ್ಯಾಹ್ನ 1 ಗಂಟೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಅಂತಿಮ ವಿಧಿವಿಧಾನಗಳು ನಡೆದವು ಎಂದು ಮಾಹಿತಿ ನೀಡಲಾಗಿದೆ. ಜೈನ ಮುನಿಗಳ ನಿಧನದ ಹಿನ್ನೆಲೆಯಲ್ಲಿ ಛತ್ತೀಸ್ಗಢ ಸರ್ಕಾರ ಭಾನುವಾರ ಅರ್ಧ ದಿನದ ಶೋಕಾಚರಣೆ ಘೋಷಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ ವರ್ಧಮಾನ್ ಎಂದೇ ಕರೆಯಲ್ಪಡುವ ವಿಶ್ವಪ್ರಸಿದ್ಧ ದಿಗಂಬರ ಜೈನ ಸಂತ ಸಂಪ್ರದಾಯದ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಜೀ ಅವರು ಇಂದು ಜಿನೈಕ್ಯರಾದರು ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಸರ್ಕಾರವು ಅರ್ಧ ದಿನದ ಶೋಕಾಚರಣೆಯನ್ನು ಘೋಷಿಸಿದೆ. ಈ ಸಮಯದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಅಥವಾ ಸಮಾರಂಭಗಳನ್ನು ನಡೆಸಲಾಗುವುದಿಲ್ಲ ಎಂದು ಸರ್ಕಾರ ಹೇಳಿತ್ತು.
ಕಳೆದ ವರ್ಷ ಛತ್ತೀಸ್ಗಢ ವಿಧಾನಸಭಾ ಚುನಾವಣೆಗೆ ಮುನ್ನ ನವೆಂಬರ್ 5 ರಂದು ಪ್ರಧಾನಿ ಮೋದಿ ಯಾತ್ರಾಸ್ಥಳವಾದ ಡೊಂಗರಗಢಕ್ಕೆ ಭೇಟಿ ನೀಡಿ, ಆಚಾರ್ಯ ವಿದ್ಯಾಸಾಗರ ಮಹಾರಾಜರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಮುನಿಗಳ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದಾರೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್ ಜಿ ಅವರ ಅಸಂಖ್ಯಾತ ಭಕ್ತರೊಂದಿಗೆ ಇವೆ. ಸಮಾಜಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳು, ವಿಶೇಷವಾಗಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ ಅವರ ಪ್ರಯತ್ನಗಳು, ಬಡತನ ನಿವಾರಣೆ, ಆರೋಗ್ಯ ರಕ್ಷಣೆ, ಶಿಕ್ಷಣಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಕ್ಕಾಗಿ ಅವರನ್ನು ಮುಂದಿನ ಪೀಳಿಗೆಯೂ ಸ್ಮರಿಸುತ್ತದೆ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.
ವರ್ಷಗಳ ಕಾಲ ಅವರ ಆಶೀರ್ವಾದ ಪಡೆಯುವ ಗೌರವವನ್ನು ನಾನು ಹೊಂದಿದ್ದೇನೆ. ಕಳೆದ ವರ್ಷದ ಕೊನೆಯಲ್ಲಿ ಛತ್ತೀಸ್ಗಢದ ಡೊಂಗರ್ಗಢ್ನಲ್ಲಿರುವ ಚಂದ್ರಗಿರಿ ಜೈನ ಮಂದಿರಕ್ಕೆ ನಾನು ಭೇಟಿ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ ನಾನು ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್ ಅವರೊಂದಿಗೆ ಸಮಯ ಕಳೆದಿದ್ದೆ. ಅವರ ಆಶೀರ್ವಾದವನ್ನೂ ಪಡೆದಿದ್ದೆ ಎಂದು ಪ್ರಧಾನಿ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗೀತ ರಚನೆಕಾರ ಗುಲ್ಜಾರ್, ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ