ಲೂಧಿಯಾನ(ಪಂಜಾಬ್): ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ, ಲೂಧಿಯಾನ ಸಂಸದ ರವನೀತ್ ಸಿಂಗ್ ಬಿಟ್ಟು ಅವರ ಅಧಿಕೃತ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ಗುಂಡಿನ ಸದ್ದು ಕೇಳಿ ಬಂದಿದೆ. ಮನೆಯ ಭದ್ರತೆಗೆ ನಿಯೋಜಿಸಿದ್ದ ನೌಕರ ಸಂದೀಪ್ ಕುಮಾರ್ಗೆ ಗುಂಡು ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಂದೀಪ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗುಂಡಿನ ಸದ್ದು ಕೇಳಿದ ಇತರ ಭದ್ರತಾ ಸಿಬ್ಬಂದಿ ಕೊಠಡಿಯೊಳಗೆ ಹೋಗಿ ನೋಡಿದಾಗ ಸಂದೀಪ್ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡು ಬಂದಿದೆ. ಇದಾದ ನಂತರ ನೌಕರರು ಸಿಐಎಸ್ಎಫ್ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಐಎಸ್ಎಫ್ ಜೊತೆಗೆ ಪೊಲೀಸರು ಕೂಡ ತನಿಖೆಯಲ್ಲಿ ನಿರತರಾಗಿದ್ದಾರೆ.
ಉತ್ತರಪ್ರದೇಶದ ಮುಜಾಫರ್ನಗರ ಪ್ರದೇಶದ ನಿವಾಸಿ ಸಂದೀಪ್ ಕುಮಾರ್, ಲೂಧಿಯಾನದ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಅವರ ಭದ್ರತಾ ದಳದಲ್ಲಿ ದೀರ್ಘಕಾಲ ನಿಯೋಜಿಸಲಾಗಿತ್ತು. ಸಂಸದ ರವನೀತ್ ಸಿಂಗ್ ಬಿಟ್ಟು ತನ್ನ ಇತರ ಭದ್ರತಾ ಸಿಬ್ಬಂದಿಯೊಂದಿಗೆ ಲುಧಿಯಾನದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ರೋಸ್ ಗಾರ್ಡನ್ ಬಳಿ ಇರುವ ಅವರ ಅಧಿಕೃತ ನಿವಾಸದಲ್ಲಿ ಕೆಲವು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಸಂದೀಪ್ ಕುಮಾರ್ ತನ್ನ ಕೋಣೆಯಲ್ಲಿ ಕುಳಿತಿದ್ದಾಗ ಆತನ ಪಿಸ್ತೂಲಿನಿಂದ ಗುಂಡು ಹಾರಿದ್ದು, ಅದು ಆತನ ಕುತ್ತಿಗೆಗೆ ತಗುಲಿದೆ ಎಂದು ಹೇಳಲಾಗುತ್ತಿದೆ. ಸಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡಿನ ಸದ್ದು ಕೇಳಿ ಮನೆಯ ಒಳಗೆ ಮತ್ತು ಹೊರಗೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಸಂದೀಪ್ ಅವರ ಕೊಠಡಿಯನ್ನು ತಲುಪಿದ್ದಾರೆ.
ಸಂಸದ ಬಿಟ್ಟು ತಮ್ಮ ಭದ್ರತಾ ಸಿಬ್ಬಂದಿಯ ಸಾವಿನ ಸುದ್ದಿ ತಿಳಿದ ತಕ್ಷಣ ಅವರ ಮನೆಗೆ ತಲುಪಿ ಸ್ಥಳದಲ್ಲಿ ಎಲ್ಲ ಮಾಹಿತಿ ಸಂಗ್ರಹಿಸಿದರು. ಸಿಐಎಸ್ಎಫ್ ಅಧಿಕಾರಿಗಳು ಮತ್ತು ಪೊಲೀಸ್ ಠಾಣೆಯ ವಿಭಾಗ ಸಂಖ್ಯೆ 8 ರ ಪೊಲೀಸರು ಬುಲೆಟ್ ಹೇಗೆ ಹಾರಿದೆ ಎಂಬುದರ ಕುರಿತು ಕೊಠಡಿಯ ಒಳಗೆ ಮತ್ತು ಹೊರಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.
ಸಂಸದ ರವನೀತ್ ಸಿಂಗ್ ಬಿಟ್ಟು ಮೂಲಭೂತವಾದಿಗಳ ವಿರುದ್ಧ ಒಂದಲ್ಲ ಒಂದು ಹೇಳಿಕೆ ನೀಡುತ್ತಿದ್ದು, ಈ ಕಾರಣಕ್ಕಾಗಿಯೇ ಭಯೋತ್ಪಾದಕರ ಕೆಂಗಣ್ಣಿಗೂ ಗುರಿಯಾಗುತ್ತಿರುವುದು ಗಮನಾರ್ಹ. ಹೀಗಾಗಿ ಅವರ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸದ್ಯ ಪೊಲೀಸರು ಈ ಪ್ರಕರಣ ಕುರಿತು ಕೂಲಂಕುಷವಾಗಿ ತನಿಖೆ ನಡೆಸಿ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರ ಹಾಗೂ ಉನ್ನತಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಪೊಲೀಸ್ ಠಾಣೆ ವಿಭಾಗ ನಂ.8 ರ ಎಸ್ಎಚ್ಒ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಮಾತನಾಡಿ, ವಿಷಯ ಅನುಮಾನಾಸ್ಪದವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಎಲ್ಲವೂ ಬಹಿರಂಗವಾಗಲಿದೆ ಎಂದರು.