ಕೊಚ್ಚಿ: ಇಲ್ಲಿನ ತೃಕ್ಕಾಯಿಲ್ ಮಹಾದೇವ ದೇಗುಲದಲ್ಲಿ ಜೀವಂತ ಆನೆಗಳನ್ನು ದೇವಸ್ಥಾನದ ಆಚರಣೆಗೆ ಬಳಕೆ ಮಾಡದಂತೆ ಅಥವಾ ಬಾಡಿಗೆ ಪಡೆಯದಂತೆ ನಿರ್ಧಾರ ಮಾಡಿದೆ. ಈ ಹಿನ್ನೆಲೆ ಲಾಭರಹಿತ ಸಂಸ್ಥೆಯಾಗಿರುವ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಜೊತೆ ನಟಿ ಪ್ರಿಯಾಮಣಿ ತೃಕ್ಕಾಯಿಲ್ ಮಹಾದೇವ ದೇಗುಲಕ್ಕೆ ಜೀವಂತ ಆನೆಯ ತದ್ರೂಪದಂತಹ ಯಾಂತ್ರಿಕ (ಮೆಕಾನಿಕಲ್ ಅಥವಾ ರೋಬೊಟಿಕ್) ಆನೆಯನ್ನು ದಾನ ಮಾಡಿದ್ದಾರೆ.
ಈ ಯಾಂತ್ರಿಕ ಆನೆಗೂ ಮಹಾದೇವನ್ ಎಂದು ನಾಮಕರಣ ಮಾಡಲಾಗಿದ್ದು, ದೇಗುಲದ ಆಚರಣೆಯಲ್ಲಿ ಸುರಕ್ಷಿತ ಮತ್ತು ಹಿಂಸೆ ಮುಕ್ತವಾಗಿ ಬಳಕೆ ಮಾಡಬಹುದಾಗಿದೆ ಎಂದು ಪೇಟಾ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕೇರಳದ ದೇಗುಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡನೇ ಯಾಂತ್ರಿಕ ಆನೆ ಇದಾಗಿದೆ.
ಯಾಂತ್ರಿಕ ಆನೆ ದಾನ ನೀಡಿರುವ ಪ್ರಿಯಾಮಣಿ, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪೇಟಾ ಇಂಡಿಯಾದ ಜೊತೆಗೂಡಿ ಯಾಂತ್ರಿಕ ಆನೆ ದಾನ ಮಾಡುತ್ತಿರುವುದು ತೃಪ್ತಿ ನೀಡಿದೆ. ಈ ಮೂಲಕ ಭಕ್ತಾದಿಗಳು ಶುಭ ಸಂದರ್ಭದಲ್ಲಿ ಸುರಕ್ಷಿತ ಮತ್ತು ಪ್ರಾಣಿ ಸ್ನೇಹಿ ವಾತಾವರಣದಲ್ಲಿ ಭಾಗಿಯಾಗಬಹುದು. ಆಧುನಿಕ ತಂತ್ರಜ್ಞಾನಗಳು ಎಂದರೆ ನಾವು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಅಭ್ಯಾಸವನ್ನು ನಡೆಸಬಹುದು. ಈ ಮೂಲಕ ಪ್ರಾಣಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.
ಈ ಆನೆ ದಾನದ ಉದ್ಘಾಟನಾ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ತೃಕ್ಕಾಯಿಲ್ ಮಹಾದೇವ ದೇಗುಲ ಮಾಲೀಕ ತೆಕ್ಕಿಣಿಯೆದತ್ ವಲ್ಲಭನ್ ನಂಬೂಧರಿ ಮಾತನಾಡಿ, ಈ ಯಾಂತ್ರಿಕ ಆನೆ ಮಹಾದೇವನ್ ಅನ್ನು ಬಳಸಲು ನಮಗೆ ಖುಷಿಯಾಗಿದೆ. ಎಲ್ಲಾ ಪ್ರಾಣಿಗಳನ್ನು ದೇವರು ನಿರ್ಮಿಸಿದ್ದಾರೆ. ಅವು ಕೂಡ ಮನುಷ್ಯರಂತೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಕುಟುಂಬದೊಂದಿಗೆ ಜೀವಿಸಬೇಕು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ತ್ರಿಸ್ಸೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನ ಮೊದಲ ಬಾರಿಗೆ ಹಬ್ಬಗಳಲ್ಲಿ ಜೀವಂತ ಪ್ರಾಣಿಗಳ ಬಳಕೆ ಮಾಡುವುದಿಲ್ಲ. ಬದಲಾಗಿ ದೇಗುಲದ ಸಂಪ್ರದಾಯಗಳ ಆಚರಣೆಗೆ ರೋಬೊಟಿಕ್ ಆನೆ ಬಳಕೆ ಮಾಡಲು ನಿರ್ಧರಿಸುವುದಾಗಿ ತಿಳಿಸಿತು. ಅದರಂತೆ ಮೊದಲ ಯಾಂತ್ರಿಕೃತ ಆನೆ ತ್ರಿಸ್ಸೂರ್ ದೇಗುಲದಲ್ಲಿ ಕಾಣಿಸಿಕೊಂಡಿತು.
ಕೇರಳ ಸೇರಿದಂತೆ ದೇಶದಲ್ಲಿ ಸೆರೆಯಲ್ಲಿರುವ ಅನೇಕ ಆನೆಗಳನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡು ದೇಗುಲದ ಕಾರ್ಯಾಚರಣೆಗೆ ಬಳಕೆ ಮಾಡಲಾಗುತ್ತಿತ್ತು. ಜೊತೆಗೆ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಇವುಗಳನ್ನು ತಮ್ಮ ಆದೇಶಕ್ಕೆ ಪಳಗಿಸಲು ಹಿಂಸೆ ನೀಡಲಾಗುತ್ತಿತ್ತು ಎಂದು ಪೇಟಾ ಈ ಹಿಂದೆ ಆರೋಪಿಸಿತ್ತು.
ಇದನ್ನೂ ಓದಿ: ವಾಹನಗಳಿಗೆ ಭಾರತ್ ಸರಣಿಯ ನಂಬರ್ ಪ್ಲೇಟ್: ಅನುಕೂಲವೇನು? ಅರ್ಜಿ ಸಲ್ಲಿಸುವುದು ಹೇಗೆ?