ತಿರುವನಂತಪುರಂ: ಪ್ರಿಯಕರನಿಗೆ ಆಯುರ್ವೇದ ಔಷಧದಲ್ಲಿ ವಿಷಕಾರಿ ರಾಸಾಯನಿಕ ಮಿಶ್ರಣ ಮಾಡಿ ಹತ್ಯೆ ಮಾಡಿದ ಆರೋಪದ ಮೇಲೆ 24 ವರ್ಷದ ಗ್ರೀಷ್ಮಾ ಎಂಬ ಯುವತಿಗೆ ಮರಣದಂಡನೆ ವಿಧಿಸಿ ತಿರುವನಂತಪುರಂನ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.
ಈ ತೀರ್ಪು ಹೊರ ಬೀಳುತ್ತಿದ್ದಂತೆ ಗ್ರೀಷ್ಮಾ ನಿರ್ಭಾವಕ್ಕೆ ಒಳಗಾಗಿದ್ದು, ಸಾವನ್ನಪ್ಪಿದ ಯುವಕ ಶರೋನ್ ರಾಜ್ ಕುಟುಂಬಸ್ಥರ ಕಣ್ಣೀರಲ್ಲಿ ಆತನ ಸಾವಿಗೆ ನ್ಯಾಯ ದೊರೆತ ಭಾವದಲ್ಲಿ ಕಣ್ಣೀರಿಗೆ ಜಾರಿದರು. ಮತ್ತೊಂದು ಕಡೆ ಇದೊಂದು ಹೀನಕೃತ್ಯವಾಗಿದ್ದು, ಆರೋಪಿಯು ಯಾವುದೇ ವಿನಾಯಿತಿಗೆ ಅರ್ಹವಾಗಿಲ್ಲ. ಯಾವುದೇ ಪ್ರತ್ಯಕ್ಷದರ್ಶಿ ಸಾಕ್ಷ್ಯಿಗಳಿಲ್ಲದಿದ್ದರೂ, ಪೊಲೀಸರು ಉತ್ತಮ ರೀತಿಯ ತನಿಖೆ ನಡೆಸಿದ ಬಗ್ಗೆ ಕೋರ್ಟ್ ಪ್ರಶಂಸೆ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಭಾಗಿಯಾದ ಮಾವನಿಗೆ 3ವರ್ಷ ಶಿಕ್ಷೆ, ತಾಯಿ ಬಿಡುಗಡೆ: ಪ್ರಕರಣದಲ್ಲಿ ಭಾಗಿಯಾದ ಗ್ರೀಷ್ಮಾ ಸಹೋದರ ಮಾವನಿಗೂ ಮೂರು ವರ್ಷ ಶಿಕ್ಷೆ ವಿಧಿಸಲಾಗಿದ್ದು, ಪ್ರಕರಣದ ಎರಡನೇ ಆರೋಪಿಯಾಗಿರುವ ಗ್ರೀಷ್ಮಾ ತಾಯಿಯನ್ನು ಬಿಡುಗಡೆ ಮಾಡಲಾಗಿದೆ.
ಘಟನೆಯ ಹಿನ್ನೆಲೆ: ಗ್ರೀಷ್ಮಾ ಮತ್ತು ಶರೋನ್ ರಾಜ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಮೊದಲ ಗಂಡ ಸಾವನ್ನಪ್ಪಿದ ಬಳಿಕ ನೆಮ್ಮದಿಯಾಗಿ ಎರಡನೇ ಮದುವೆ ಆಗಬಹುದು ಎಂಬ ಜ್ಯೋತಿಷಿಯ ಮಾತನನ್ನು ಗ್ರೀಷ್ಮಾ ನಂಬಿದ್ದಳು. ಈ ಮಾತಿಗೆ ಸಹಮತ ಹೊಂದಿರದ ಶರೋನ್ ಇದನ್ನು ಅನೇಕ ಬಾರಿ ಪ್ರಶ್ನಿಸುವ ಹಾಗೂ ಸವಾಲು ಹಾಕುವ ರೀತಿಯಲ್ಲಿ ನಡೆದುಕೊಂಡಿದ್ದ ಎಂಬುದು ಇಬ್ಬರ ನಡುವಣ ವಾಟ್ಸ್ಆ್ಯಪ್ ಸಂದೇಶದಿಂದ ಕಂಡು ಬಂದಿತ್ತು. ಅಲ್ಲದೇ ಶರೋನ್ ಗ್ರೀಷ್ಮಾಳನ್ನು ವೆಟ್ಟುಕಡು ಚರ್ಚ್ನಲ್ಲಿ ಸಾಕೇಂತಿಕವಾಗಿ ಮದುವೆಯಾಗಿ, ಹಣೆಗೆ ಸಿಂಧೂರವನ್ನೂ ಕೂಡಾ ಹಚ್ಚಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಹತ್ಯೆಗೂ ಮುನ್ನ ಎರಡು ಬಾರಿ ಕೊಲೆ ಯತ್ನ ಮಾಡಿದ್ದ ಅಪರಾಧಿ: ಈ ನಡುವೆ ಸೇನೆಯಲ್ಲಿದ್ದ ವ್ಯಕ್ತಿ ಜೊತೆ ಮದುವೆ ಸಂಬಂದ ಬಂದ ಹಿನ್ನೆಲೆ ಶರೋನ್ ಜೊತೆ ಸಂಬಂಧವನ್ನು ಮುರಿದುಕೊಳ್ಳುವ ಯತ್ನ ನಡೆಸಿದ್ದ ಗ್ರೀಷ್ಮಾ, ಆತನನ್ನು ದೂರ ಇಡುವ ಸಂಬಂಧ ಎರಡು ಬಾರಿ ಕೊಲೆ ಯತ್ನ ನಡೆಸಿದ್ದಳು. ಮೊದಲ ಪ್ರಯತ್ನದಲ್ಲಿ ಜ್ಯೂಸ್ಗೆ ಪ್ಯಾರಾಸಿಟಮಲ್ ಆಗಿ ನೀಡಿದ್ದಳು. ಈ ವೇಳೆ ಅಸ್ವಸ್ಥಗೊಂಡಿದ್ದ ಆತ ಬಳಿಕ ಚೇತರಿಸಿಕೊಂಡಿದ್ದ.
ಬಳಿಕ 2022ರ ಅಕ್ಟೋಬರ್ 14ರಂದು ಮತ್ತೊಮ್ಮೆ ರಾಸಾಯನಿಕ ಮಿಶ್ರಣದ ಜ್ಯೂಸ್ನೊಂದಿಗೆ ಕೊಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಳು. ಈ ವೇಳೆ ಆತ ತೀವ್ರವಾಗಿ ಅಸ್ವಸ್ಥಗೊಂಡಿದ್ದ. 11ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಶರೋನ್ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದ
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಗ್ರೀಷ್ಮಾ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಈ ವೇಳೆ ಈ ಪ್ರಕರಣ ಮತ್ತೊಂದು ತಿರುವು ಪಡೆದಿತ್ತು. ಒಂದು ವರ್ಷ ಸೆರೆವಾಸ ಅನುಭವಿಸಿದ್ದ ಗ್ರೀಷ್ಮಾ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದಳು.
ಕೇರಳದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ 2024ರ ಅಕ್ಟೋಬರ್ 15ರಂದು ಆರಂಭಿಸಿ, ಜನವರಿ 3,2025ರವರೆಗೆ ನಡೆಸಿತು. ಇದರಲ್ಲಿ 95 ಸಾಕ್ಷಿಗಳನ್ನು ಪಡೆದುಕೊಂಡಿತ್ತು. ಅಂತಿಮವಾಗಿ ಇಂದು ತೀರ್ಪು ಹೊರ ಬಿದ್ದಿದೆ. (ಐಎಎನ್ಎಸ್)
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ