ವಿಶಾಖಪಟ್ಟಣಂ (ಆಂಧ್ರಪ್ರದೇಶ): ವಿಶಾಖಪಟ್ಟಣಂ ಕರಾವಳಿಯಲ್ಲಿ ಪಾಕಿಸ್ತಾನದ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಭಾರತೀಯ ನೌಕಾಪಡೆಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಇತ್ತೀಚೆಗೆ ಪತ್ತೆ ಹಚ್ಚಿದೆ. ಈ ಅವಶೇಷಗಳು 1971ರ ಭಾರತ-ಪಾಕ್ ಯುದ್ಧದ ವೇಳೆ ಬಂಗಾಳಕೊಲ್ಲಿಯಲ್ಲಿ ಮುಳುಗಿದ ಪಿಎನ್ಎಸ್ ಘಾಜಿ ನೌಕೆಗೆ ಸೇರಿದ್ದು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಗೆ ಹೊಸದಾಗಿ ಸೇರಿರುವ ನೀರೊಳಗಿನ ಶೋಧ ಮತ್ತು ಪಾರುಗಾಣಿಕಾ ಸಾಮರ್ಥ್ಯ ಹೊಂದಿರುವ ಡೀಪ್ ಸಬ್ಮರ್ಜೆನ್ಸ್ ರೆಸ್ಕ್ಯೂ ವೆಹಿಕಲ್ (Deep Submergence Rescue Vehicle -DSRV) ತಂತ್ರಜ್ಞಾನವು ಪಿಎನ್ಎಸ್ ಘಾಜಿ ಜಲಾಂತರ್ಗಾಮಿ ನೌಕೆಯ ಅವಶೇಷಗಳನ್ನು ಪತ್ತೆ ಮಾಡಿದೆ. ಜಲಾಂತರ್ಗಾಮಿ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಇದರ ಮಾಹಿತಿ ಬಹಿರಂಗಪಡಿಸಿದ್ದಾರೆ.
ಡಿಎಸ್ಆರ್ವಿ ನೆರವಿನಿಂದ ಘಾಜಿ ಅವಶೇಷಗಳನ್ನು ಗುರುತಿಸಿದ್ದೇವೆ. ವಿಶಾಖಪಟ್ಟಣಂ ಕರಾವಳಿಯಿಂದ ಕೆಲವೇ ನಾಟಿಕಲ್ ಮೈಲುಗಳಷ್ಟು ಸಮುದ್ರದ ಅಡಿಯಲ್ಲಿ ಬಿದ್ದಿದ್ದವು. ಯುದ್ಧದಲ್ಲಿ ಸತ್ತವರನ್ನು ಗೌರವಿಸುವುದು ನಮ್ಮ ನೌಕಾ ಪದ್ಧತಿಯಾಗಿದೆ. ಅದಕ್ಕಾಗಿಯೇ ಅವಶೇಷಗಳನ್ನು ಮುಟ್ಟಲಿಲ್ಲ. ಕರಾವಳಿಯಿಂದ 2-2.5 ಕಿಲೋಮೀಟರ್ ದೂರದಲ್ಲಿ ಸಮುದ್ರದ ನೀರಿನಲ್ಲಿ 100 ಮೀಟರ್ ಆಳದಲ್ಲಿ ಈ ಅವಶೇಷಗಳು ಕಂಡು ಬಂದಿವೆ. ವಿಶಾಖಪಟ್ಟಣಂನಲ್ಲಿ ಸಮುದ್ರದ ಆಳವು ಸರಾಸರಿ 16 ಮೀಟರ್ ಆಗಿದ್ದು, ಜಲಾಂತರ್ಗಾಮಿ ನೌಕೆಗಳು ಕರಾವಳಿಯ ಬಳಿ ಬಂದು ಹೋಗಬಹುದು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಏನಿದು ಡಿಎಸ್ಆರ್ವಿ ತಂತ್ರಜ್ಞಾನ?: 2013ರಲ್ಲಿ ಐಎನ್ಎಸ್ ಸಿಂಧ್ರಕ್ಷಕ್ ನೌಕೆಯ ಅಪಘಾತದಲ್ಲಿ 13 ಜನರು ಸಾವನ್ನಪ್ಪಿದ್ದರು. ಈ ದುರಂತದ ನಂತರ 2018ರಲ್ಲಿ ಮೊದಲ ಬಾರಿಗೆ ಡಿಎಸ್ಆರ್ವಿ ತಂತ್ರಜ್ಞಾನವನ್ನು ಪರಿಚಯಿಸಲಾಯಿತು. ಇದು ಸಂಕಷ್ಟದಲ್ಲಿರುವ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಗುರುತಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನೆರವಾಗುತ್ತದೆ.
ಈ ಡಿಎಸ್ಆರ್ವಿ 650 ಮೀಟರ್ ಆಳದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ ನಮ್ಮಲ್ಲಿ ಎರಡು ಡಿಎಸ್ಆರ್ವಿಗಳು ಬಳಕೆಯಲ್ಲಿವೆ. ಒಂದನ್ನು ಪೂರ್ವ ಕರಾವಳಿಯಲ್ಲಿ ಮತ್ತು ಇನ್ನೊಂದನ್ನು ಪಶ್ಚಿಮ ಕರಾವಳಿಯಲ್ಲಿ ಬಳಸಲಾಗುತ್ತಿದೆ. ವಿಶ್ವದಲ್ಲಿ ಭಾರತ ಸೇರಿದಂತೆ 12 ದೇಶಗಳಲ್ಲಿ ಮಾತ್ರ ಇಂತಹ ತಂತ್ರಜ್ಞಾನವಿದೆ. ವಿಶಾಖಪಟ್ಟಣಂನಲ್ಲಿ ಹಿಂದೂಸ್ತಾನ್ ಶಿಪ್ಯಾರ್ಡ್ನಲ್ಲಿ ಇಂತಹ ಎರಡು ಹಡಗುಗಳನ್ನು ಸ್ಥಳೀಯವಾಗಿ ತಯಾರಿಸಲು ಭಾರತವು ಯೋಜಿಸಿದೆ.
ಪಿಎನ್ಎಸ್ ಘಾಜಿ ಹಿನ್ನೆಲೆ: ಪಾಕಿಸ್ತಾನದ ಪಿಎನ್ಎಸ್ ಘಾಜಿ ನೌಕೆಯು ವಾಸ್ತವವಾಗಿ ಅಮೆರಿಕದ ನೌಕಾಪಡೆಯ ಟೆಂಚ್ ಸರಣಿಯ ಡೀಸೆಲ್ ಎಲೆಕ್ಟ್ರಿಕ್ ಜಲಾಂತರ್ಗಾಮಿ. 1963ರಲ್ಲಿ ಅಮೆರಿಕ ಇದನ್ನು ಪಾಕಿಸ್ತಾನಕ್ಕೆ ನೀಡಿತ್ತು. 1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಭುಗಿಲೆದ್ದ ನಂತರ, ಆ ವರ್ಷದ ಡಿಸೆಂಬರ್ನಲ್ಲಿ ಪಿಎನ್ಎಸ್ ಘಾಜಿ ಜಲಾಂತರ್ಗಾಮಿ ನೌಕೆಯು ಶ್ರೀಲಂಕಾದ ಮೂಲಕ ವಿಶಾಖಪಟ್ಟಣಂ ತೀರವನ್ನು ತಲುಪಿತ್ತು. ಬಳಿಕ ಸಮುದ್ರದಲ್ಲಿ ಭಾರಿ ಸ್ಫೋಟ ಸಂಭವಿಸಿ ಘಾಜಿ ನೀರಿನಲ್ಲಿ ಮುಳುಗಿತ್ತು.
ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡು ಮೀನುಗಾರರ ಬಂಧನಕ್ಕೆ ಖಂಡನೆ; ಕಚ್ಚತೀವು ಉತ್ಸವ ಬಹಿಷ್ಕಾರ