ಋಷಿಕೇಶ (ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ಧಾಮದ ಬಾಗಿಲು ಮೇ 4 ರಂದು ಬೆಳಗ್ಗೆ 6 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆಯಲಿದೆ.
ಬಸಂತ್ ಪಂಚಮಿಯ ಶುಭ ಸಂದರ್ಭದಲ್ಲಿ ತೆಹ್ರಿ ಜಿಲ್ಲೆಯ ನರೇಂದ್ರ ನಗರದ ಅರಮನೆಯಲ್ಲಿ ನಡೆದ ಸರಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ ಹಾಗೂ ಪ್ರಾರ್ಥನೆ ನಂತರ ಪಂಚಾಂಗ ಲೆಕ್ಕಾಚಾರ ಮಾಡುವ ಮೂಲಕ ಬದರಿನಾಥ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ನಿರ್ಧರಿಸಲಾಯಿತು. ಇದೇ ಸಮಯದಲ್ಲಿ ಗಡು ಘಡ(ಪವಿತ್ರ ಎಣ್ಣೆಯ ಪಾತ್ರೆ)ಕ್ಕೆ ಎಳ್ಳೆಣ್ಣೆ ಸುರಿಯುವ ದಿನಾಂಕವನ್ನು ಏಪ್ರಿಲ್ 22ಕ್ಕೆ ನಿಗದಿಪಡಿಸಲಾಯಿತು.
ತೆಹ್ರಿ ರಾಜಮನೆತನದವರು, ಬದರಿನಾಥ- ಕೇದಾರನಾಥ ದೇವಾಲಯ ಸಮಿತಿ, ದಿಮ್ರಿ ಧಾರ್ಮಿಕ ಕೇಂದ್ರ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ಮುಖಂಡರು ಬದರಿನಾಥ ದ್ವಾರಗಳನ್ನು ತೆರೆಯುವ ದಿನಾಂಕವನ್ನು ನಿರ್ಧರಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ನರೇಂದ್ರ ನಗರದ ರಾಜ್ ಮಹಲ್ನಲ್ಲಿ, ಮಹಾರಾಜ ಮನುಜ್ಯೇಂದ್ರ ಶಾ, ರಾಜಕುಮಾರಿ ಶಿರ್ಜಾ ಶಾ, ಪಂಡಿತ್ ಕೃಷ್ಣ ಪ್ರಸಾದ್ ಉನಿಯಾಲ್ ಉಪಸ್ಥಿತರಿದ್ದರು.
ಬದರಿನಾಥ ಧಾಮದ ಬಾಗಿಲು ತೆರೆಯಲು ಹಾಗೂ ಮುಚ್ಚಲು ವಿಶೇಷ ಪ್ರಕ್ರಿಯೆ ಇದೆ. ತೆಹ್ರಿ ಜಿಲ್ಲೆಯ ನರಂದ್ರನಗರದಲ್ಲಿರುವ ರಾಜಮನೆತನದ ಆಸ್ಥಾನದಲ್ಲಿ ಬಸಂತ್ ಪಂಚಮಿಯಂದು ಹಾಗೂ ವಿಯಜದಶಮಿ ಹಬ್ಬದಂದು ಪೂಜೆ ಹಾಗೂ ಪಂಚಾಂಗ ಲೆಕ್ಕಾಚಾರದ ನಂತರ ಬದರಿನಾಥ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ನಿರ್ಧರಿಸಲಾಗುತ್ತದೆ.
2024ರ ನವೆಂಬರ್ 17ರಂದು ಚಳಿಗಾಲದಲ್ಲಿ ಹಿಮಾವೃತವಾಗುವ ಹಿನ್ನೆಲೆ ಬದರಿನಾಥ ಧಾಮದ ಬಾಗಿಲುಗಳನ್ನು ಮುಚ್ಚಲಾಗಿತ್ತು. ಇದಕ್ಕೆ ಅನೇಕ ಭಕ್ತರು ಸಾಕ್ಷಿಯಾಗಿದ್ದರು.
ಇದನ್ನೂ ಓದಿ: ಚಳಿಗಾಲದಲ್ಲಿ ಹಿಮ ಆವೃತ: ನವೆಂಬರ್ 17ಕ್ಕೆ ಬದರಿನಾಥ್ ದೇವಸ್ಥಾನ ಬಾಗಿಲು ಬಂದ್