ನವದೆಹಲಿ: ತುರ್ತು ವೈದ್ಯಕೀಯ ಸೇವೆಗಳಲ್ಲಿ ಅಗತ್ಯವಿರುವ ಆಂಬ್ಯುಲೆನ್ಸ್ಗಳ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರದ ಅಧೀನ ಸಂಸ್ಥೆಗಳಾದ ಗುಣಮಟ್ಟ ಮತ್ತು ಮಾನ್ಯತೆ ಸಂಸ್ಥೆ (QAI), ಆರೋಗ್ಯ ಮತ್ತು ಸಾಮಾಜಿಕ ಆರೈಕೆಯ ಮಾನ್ಯತೆ ಕೇಂದ್ರವು (CAHSC) ಆಂಬ್ಯುಲೆನ್ಸ್ಗಳ ಮಾನ್ಯತೆ ಮಾನದಂಡಗಳನ್ನು ರೂಪಿಸಿವೆ.
ಈ ಸಂಸ್ಥೆಗಳು ಆರೋಗ್ಯ ಸಚಿವಾಲಯಕ್ಕೆ ಯೋಜನೆಯ ವಿವರಗಳನ್ನು ಸಲ್ಲಿಸಿದೆ. ಇದನ್ನು ಎಲ್ಲಾ ಆಸ್ಪತ್ರೆಗಳು (ಸರ್ಕಾರಿ ಮತ್ತು ಖಾಸಗಿ) ತಮ್ಮ ಆಂಬ್ಯುಲೆನ್ಸ್ ಸೇವೆಗಳ ಸುಧಾರಣೆಗಾಗಿ ಅಳವಡಿಸಿಕೊಳ್ಳಲಿವೆ. ಇದು ನಿರ್ಣಾಯಕ ಅಂಶವಾಗಿದ್ದು, ದೇಶಾದ್ಯಂತ ತುರ್ತು ವೈದ್ಯಕೀಯ ಸೇವೆಗಳ ಗುಣಮಟ್ಟ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಬಹುದಾಗಿದೆ.
ಆಂಬ್ಯುಲೆನ್ಸ್ಗಳು ಕೇವಲ ಸಾರಿಗೆಯಲ್ಲ: ಆಂಬ್ಯುಲೆನ್ಸ್ಗಳು ಕೇವಲ ಸಾರಿಗೆ ವ್ಯವಸ್ಥೆಯಲ್ಲ. ಈ ಸೇವೆಯು ತುರ್ತು ಅಗತ್ಯದಲ್ಲಿ ರಕ್ಷಣೆ ನೀಡುವ ಜೀವಸೆಲೆಯಾಗಿವೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡುವ ಮೂಲವಾಗಿವೆ. ಈಗ ಹೊಸದಾಗಿ ಮಾನ್ಯತೆ ಮಾನದಂಡಗಳನ್ನು ರೂಪಿಸುವ ಮೂಲಕ ಗುಣಮಟ್ಟ ಸಾಧಿಸಬಹುದು. ಜೊತೆಗೆ, ಈ ಮಹತ್ವದ ಕ್ಷೇತ್ರದಲ್ಲಿ ನಿರಂತರ ಸುಧಾರಣೆಗೆ ಬದ್ಧರಾಗಿದ್ದೇವೆ ಎಂದು ಕ್ಯೂಎಐ ಸಂಸ್ಥಾಪಕ ಸಿಇಒ ಡಾ. ಭುಪೇಂದ್ರ ಕುಮಾರ್ ರಾಣಾ ಈಟಿವಿ ಭಾರತಕ್ಕೆ ತಿಳಿಸಿದರು.
ಕ್ವಾಲಿಟಿ ಅಂಡ್ ಅಕ್ರೆಡಿಟೇಶನ್ ಇನ್ಸ್ಟಿಟ್ಯೂಟ್ ಮತ್ತು ಸೆಂಟರ್ ಫಾರ್ ಅಕ್ರೆಡಿಟೇಶನ್ ಆಫ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ನೇತೃತ್ವದಲ್ಲಿ ರೂಪಿಸಲಾದ ಮಾನದಂಡಗಳಿಂದ ರೋಗಿಗಳು ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ದೇಶದಲ್ಲಿ ವೈದ್ಯಕೀಯ ವಾಹನಗಳ ಸಂಸ್ಥೆಗಳಿಗೆ ಮಾನ್ಯತೆ ಮಾನದಂಡಗಳ ಪರಿಚಯವು ತುರ್ತು ವೈದ್ಯಕೀಯ ಸೇವೆಗಳ (EMS) ಗುಣಮಟ್ಟ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಗಮನಾರ್ಹ ಬದಲಾವಣೆ ಉಂಟಾಗಿದೆ ಎಂದು ಸಂಸ್ಥೆಗಳು ಭರವಸೆ ನೀಡಿವೆ.
ಏಕರೂಪದ ಪ್ರೋಟೋಕಾಲ್ಗಳು ಮತ್ತು ಮಾನದಂಡಗಳನ್ನು ರೂಪಿಸುವ ಮೂಲಕ ವೈದ್ಯಕೀಯ ದೋಷಗಳನ್ನು ಕಡಿಮೆ ಮಾಡುತ್ತದೆ. ರೋಗಿಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಇದು ಇಎಂಎಸ್ ಸಿಬ್ಬಂದಿಗೆ ಸಮಗ್ರ ತರಬೇತಿಯನ್ನು ನೀಡಲಿದೆ. ವೃತ್ತಿಪರತೆಯನ್ನು ಹೆಚ್ಚಿಸಲಿದೆ. ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ನೆರವು ನೀಡುತ್ತದೆ. ಈ ಕ್ರಮವು ಒಟ್ಟಾರೆ ಚಿಕಿತ್ಸಾ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ ತುರ್ತು ಸೇವೆಗಳಲ್ಲಿ ಜನರ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಡಾ.ತಮೋರಿಶ್ ಕೋಲೆ ಹೇಳಿದರು.
ಭಾರತದಲ್ಲಿ ಆರೋಗ್ಯ ಕ್ಷೇತ್ರದ ಶಿಕ್ಷಣ, ತರಬೇತಿ, ಗುಣಮಟ್ಟ ಸುಧಾರಣೆ ಮತ್ತು ಮಾನ್ಯತೆ/ಪ್ರಮಾಣೀಕರಣದ ಪರಿಸರ ವ್ಯವಸ್ಥೆಯನ್ನು ರಚಿಸಲು ಕ್ವಾಲಿಟಿ ಅಂಡ್ ಅಕ್ರೆಡಿಟೇಶನ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಮೊಬೈಲ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಪಾಸ್ ಲಭ್ಯ!: ನೀವು ಪಡೆಯುವುದು ಹೇಗೆ? - BMTC Digital Pass