ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಳಿಂಗ ಸರ್ಪ.. ನಾಡಿನಿಂದ ಮತ್ತೆ ಕಾಡಿಗೆ
ಕಾರವಾರ: ಬೃಹತ್ ಕಾಳಿಂಗ ಸರ್ಪವೊಂದು ಆಹಾರ ಅರಸಿ ಕಾಡಿನಿಂದ ಜನವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ತಾಲೂಕಿನ ಶಿರವಾಡದ ನಾರಗೇರಿಯಲ್ಲಿ ನಡೆದಿದೆ. ಸಮೀಪದಲ್ಲೇ ದಟ್ಟ ಅರಣ್ಯ ಇರುವುದರಿಂದ ಅಲ್ಲಿಂದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ತನ್ನ ಬೇಟೆಯನ್ನು ಹಿಂಬಾಲಿಸಿಯೋ ಅಥವಾ ಆಹಾರವನ್ನು ಹುಡುಕುತ್ತಲೋ ನಾರಗೇರಿಯ ಜನವಸತಿ ಪ್ರದೇಶಕ್ಕೆ ಬಂದಿತ್ತು. ಈ ವೇಳೆ ಬಂಜರು ಗದ್ದೆಯಲ್ಲಿ ಹಾವು ಇರುವುದನ್ನು ಕಂಡ ಗ್ರಾಮಸ್ಥರು ಕೆಲಕಾಲ ಆತಂಕಕ್ಕೆ ಒಳಗಾದರು. ಬಳಿಕ ಉರಗ ಪ್ರೇಮಿ ನಿತಿನ್ ಪೂಜಾರಿ ಅವರಿಗೆ ವಿಷಯ ಮುಟ್ಟಿಸಲಾಯಿತು. ಸ್ಥಳಕ್ಕಾಗಮಿಸಿದ ಅವರು ಸ್ಥಳೀಯರ ನೆರವಿನಿಂದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ಬಳಿಕ ಅರಣ್ಯಾಧಿಕಾರಿಗಳು ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.