ಕಾಫಿ ಪುಡಿ ಬಳಸಿ ಸಿದ್ಧಾರ್ಥ್ ಭಾವಚಿತ್ರ ಬಿಡಿಸಿದ ತುಮಕೂರು ಕಲಾವಿದ!
ತುಮಕೂರು: ಕಾಫಿ ದಿಗ್ಗಜ ಸಿದ್ಧಾರ್ಥ್ ಅವರನ್ನು ವಿಭಿನ್ನವಾಗಿ ತುಮಕೂರಿನ ಕಲಾವಿದರೊಬ್ಬರು ಸ್ಮರಿಸಿಕೊಂಡಿದ್ದಾರೆ. ಕಾಫಿ ಪುಡಿಯನ್ನು ಬಳಸಿಕೊಂಡು ಅವರ ಕಲಾಕೃತಿಯನ್ನು ರಚಿಸಿರುವುದು ಇಲ್ಲಿ ಗಮನಾರ್ಹ. ಈ ಕಲಾವಿದನ ಹೆಸರು ಪರಮೇಶ್ ಗುಬ್ಬಿ. ಬಿಕಾಂ ವ್ಯಾಸಂಗ ಮಾಡಿರುವ ಇವರು, ಇಂಟೀರಿಯರ್ ಡೆಕೋರೇಟರ್ ಆಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಸಿದ್ಧಾರ್ಥ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ ಅವರಿಗೆ ತಮ್ಮ ವೃತ್ತಿ ಬದುಕಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲು ಮನಸ್ಸಾಗಿದೆ. ಹಾಗಾಗಿ ಕಾಫಿ ಪುಡಿಯನ್ನು ಬಳಸಿ ತುಮಕೂರಿನ ಕೆಫೆ ಕಾಫಿ ಡೇಯಲ್ಲಿ ಭಾವಚಿತ್ರವೊಂದನ್ನು ರಚಿಸಿದ್ದಾರೆ. ಇದೀಗ ಅವರು ರಚಿಸಿರುವ ಸಿದ್ಧಾರ್ಥ ಅವರ ಭಾವಚಿತ್ರ ನೋಡಲು ಸಾರ್ವಜನಿಕರು ಬರುತ್ತಿದ್ದು, ತಮ್ಮ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.