ಅನಗತ್ಯವಾಗಿ ಮನೆಯಿಂದ ಹೊರಬಂದರೆ ಇವನ ಕಣ್ಣಿಗೆ ಬೀಳೋದು ಗ್ಯಾರಂಟಿ!
ಕೊರೊನಾ ತಡೆಗೆ ಲಾಕ್ಡೌನ್ ಆದೇಶ ಇದ್ದರೂ ಅನವಶ್ಯಕವಾಗಿ ಜನರು ಗುಂಪು ಸೇರುವುದನ್ನು ತಡೆಯಲು ದಾವಣಗೆರೆ ಪೊಲೀಸ್ ಇಲಾಖೆ ಡ್ರೋನ್ ಕ್ಯಾಮರಾಗಳನ್ನು ಬಳಸುತ್ತಿದೆ. ಪೊಲೀಸ್ ಕಾನ್ಸ್ಟೇಬಲ್ ಎಂ. ಹೆಚ್.ಪ್ರಶಾಂತ್ ಕುಮಾರ್ ಡ್ರೋನ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಜಾದ್ ನಗರ ಬಡಾವಣೆಯಲ್ಲಿ ಈಗಾಗಲೇ ಚಿತ್ರೀಕರಿಸಲಾಗಿದೆ. ಕೊರೊನಾ ಸೋಂಕು ತಡೆಗೆ ಮನೆಯಿಂದ ಯಾರೂ ಹೊರಬರಬಾರದು ಎಂದು ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಿದೆ. ಅಗತ್ಯ ಕೆಲಸವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ, ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಎಸ್ಪಿ ಹನುಮಂತರಾಯ ಎಚ್ಚರಿಕೆ ನೀಡಿದ್ದಾರೆ.