ಅಕ್ಕಮಹಾದೇವಿ ವಚನ ಗ್ರಂಥವನ್ನು ತಲೆ ಮೇಲೆ ಹೊತ್ತು ತಂದ ನಟಿ!
ಹರಿಹರದ ಹರಿಹರೇಶ್ವರ ದೇವಸ್ಥಾನದಿಂದ ಅಕ್ಕಮಹಾದೇವಿ ವಚನ ವಿಜಯೋತ್ಸವ ಮೆರವಣಿಗೆಗೆ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲ ಜೊಲ್ಲೆ ಚಾಲನೆ ನೀಡಿದರು. ಆನೆಯ ಅಂಬಾರಿಯಲ್ಲಿ ಅಕ್ಕಮಹಾದೇವಿಯ ವಚನಗಳ ಗ್ರಂಥವನ್ನು ಇಟ್ಟು ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡ ಶ್ರೀ ವಚನಾನಂದ ಸ್ವಾಮೀಜಿ, ಗಣ್ಯರು, ಮುಖಂಡರು, ಮಕ್ಕಳು, ಮಹಿಳೆಯರು ವಚನ ಸಾಹಿತ್ಯದ ಗ್ರಂಥಗಳನ್ನು ತೆಲೆಯ ಮೇಲೆ ಹೊತ್ತು ಸಾಗಿದರು. ಇದೇ ವೇಳೆ ಚಿತ್ರ ನಟಿ ರಾಗಿಣಿ ದ್ವಿವೇದಿ ತನ್ನ ತಲೆಯ ಮೇಲೆ ವಚನ ಗ್ರಂಥವನ್ನು ಹೊತ್ತು ಸಾಗಿದ್ದು, ರಾಣೆಬೆನ್ನೂರು ಶಾಸಕ ಡೊಳ್ಳಿನ ತಾಳಕ್ಕೆ ಕುಣಿದಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಸಮಾಳ, ವೀರಗಾಸೆ, ಹಲಗೆ, ಡೊಳ್ಳು, ಡ್ರಂ ಸಟ್, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಕುಂಭ ಹೊತ್ತ ಮಹಿಳೆಯರು, ಮಕ್ಕಳು ಅಕ್ಕಮಹಾದೇವಿ, ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ಕಿತ್ತೂರರಾಣಿ ಚನ್ನಮ್ಮ ಹಾಗೂ ಸ್ವಾಮಿ ವಿವೇಕಾನಂದರ ವೇಷ ಧರಿಸಿ ಮೆರವಣಿಗೆಗೆ ಮೆರಗು ನೀಡಿದರು.