ಉಯ್ಯಾಲೆಯಿಂದ ಬಿದ್ದು ಅತ್ತೆ ಸಾವು: ಸೊಸೆಗೆ ಗಂಭೀರ ಗಾಯ - ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಜಾತ್ರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/07-09-2023/640-480-19450440-thumbnail-16x9-ran.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Sep 7, 2023, 12:53 PM IST
ನವದೆಹಲಿ/ನೋಯ್ಡಾ: ಉತ್ಸವದಲ್ಲಿ ಉಯ್ಯಾಲೆಯಿಂದ ಅತ್ತೆ ಹಾಗೂ ಸೊಸೆ ಬಿದ್ದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ನೋಯ್ಡಾದಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಘಟನೆಯಲ್ಲಿ ಅತ್ತೆ ಮೃತಪಟ್ಟಿದ್ದು, ಸೊಸೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು 50 ವರ್ಷದ ಉಷಾ ಎಂದು ಗುರುತಿಸಲಾಗಿದೆ. 30 ವರ್ಷದ ಸೊಸೆ ಶಾಲು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲ್ಲಿನ ಸೆಕ್ಟರ್ 39 ಪೊಲೀಸ್ ಠಾಣಾ ವ್ಯಾಪ್ತಿಯ ಸೋಮ್ ಬಜಾರ್ನಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಜಾತ್ರೆ ನಡೆಯಿತು. ಸದರ್ಪುರದ ನಿವಾಸಿಯಾದ ಉಷಾ ತನ್ನ ಸೊಸೆ ಶಾಲು ಜೊತೆ ಜಾತ್ರೆ ನೋಡಲು ತೆರಳಿದ್ದರು. ಈ ವೇಳೆ, ಇಬ್ಬರೂ ಉಯ್ಯಾಲೆಯಲ್ಲಿ ಆಡುತ್ತಿದ್ದರು. ಆದರೆ, ಉಯ್ಯಾಲೆ ಚಲನೆಯಲ್ಲಿ ಇರುವಾಗಲೇ ಉಷಾ ಕೆಳಗಡೆ ಇಳಿಯಲು ಯತ್ನಿಸಿದ್ದು, ಆಗ ಸೊಸೆ ಅವರನ್ನು ತಡೆಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಸಹ ಕೆಳಗಡೆ ಬಿದ್ದಿದ್ದಾರೆ. ಇದರಿಂದ ಉಷಾ ಹಾಗೂ ಶಾಲು ಗಂಭೀರವಾಗಿ ಗಾಯಗೊಂಡಿದ್ದು, ಜಾತ್ರೆಯಲ್ಲಿ ನೆರೆದಿದ್ದ ಜನರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಇಬ್ಬರನ್ನೂ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಉಷಾ ರಾತ್ರಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಈ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನೋಯ್ಡಾ ಎಸಿಪಿ-1 ರಜನೀಶ್ ವರ್ಮಾ ಪ್ರತಿಕ್ರಿಯಿಸಿ, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರ ನಿರ್ಲಕ್ಷ್ಯದಿಂದ ಮಹಿಳೆ ಉಯ್ಯಾಲೆಯಿಂದ ಬಿದ್ದಿದ್ದಾಳೆ ಎಂಬ ಬಗ್ಗೆ ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಉಯ್ಯಾಲೆಗೆ ಕುತ್ತಿಗೆ ಸಿಲುಕಿ ಬಾಲಕ ದಾರುಣ ಸಾವು