ಕೆಂಡ ಹಾದು ಭಕ್ತಿ ಪರಾಕಾಷ್ಠೆ: ಗಮನ ಸೆಳೆದ ವಿಶಿಷ್ಟ ಆಚರಣೆಯ ಕಟ್ಟೆಕೈ ಹಾಲಬ್ಬ ಆಚರಣೆ - ಹಾಲಬ್ಬ
🎬 Watch Now: Feature Video


Published : Jan 10, 2024, 8:58 AM IST
ಕಾರವಾರ (ಉತ್ತರ ಕನ್ನಡ): ರೈತರು ಬೆಳೆದ ಹೊಸ ಬೆಳೆಗಳನ್ನು ತಾವು ಬಳಸುವ ಮೊದಲು ದೇವರಿಗೆ ನೈವೇದ್ಯ ಮಾಡುವ ನಿಟ್ಟಿನಲ್ಲಿ ಆಚರಿಸುವ ವಿಶಿಷ್ಟ ರೀತಿಯ ಹಾಲಬ್ಬವೊಂದು ಸಿದ್ದಾಪುರ ತಾಲೂಕಿನ ಕಟ್ಟೆಕೈ ಗ್ರಾಮದಲ್ಲಿ ಆಚರಿಸಲಾಯಿತು.
ಈ ಹಾಲಹಬ್ಬವನ್ನು ತಲಾಂತರಗಳಿಂದ ಆಚರಿಸಲಾಗುತ್ತದೆ. ಅದರಂತೆ ಕಳೆದ ಮೂರು ದಿನಗಳಿಂದ ಹಬ್ಬವನ್ನು ಆಚರಿಸುತ್ತ ಬಂದಿದ್ದು, ಮೊದಲ ದಿನ ಮಹಾಸತಿ ದೇವಾಲಯದಿಂದ ದೇವರನ್ನು ಹುಲಿದೇವರ ಮನೆಗೆ ತಂದು ಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರು, ತಾವು ಬೆಳೆದ ಹೊಸ ಬೆಳೆಗಳನ್ನು ದೇವರಿಗೆ ನೈವೇದ್ಯ ಮಾಡಿದರು. ಎರಡನೇ ದಿನ ಬ್ರಹ್ಮದೇವರ ಕಾನಿನಲ್ಲಿ ಕೆಂಡದ ಸೇವೆಗೆ ಸಿದ್ಧತೆ ಮಾಡಿಕೊಂಡು ಸಂಜೆ ಹೊತ್ತಿಗೆ ದೇವರನ್ನು ಅರಣ್ಯಕ್ಕೆ ಕೊಂಡೊಯ್ದು ಜಾಗರಣ ನಡೆಸಿದರು. ಮೂರನೇ ದಿನವಾದ ಮಂಗಳವಾರದಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವರ ಪಾಲಿಕೆಯನ್ನು ಹೊತ್ತು ಸಿದ್ಧಗೊಂಡಿದ್ದ ಕೆಂಡದ ರಾಶಿಯ ಸುತ್ತ ಐದು ಸುತ್ತ ಸುತ್ತುವರಿದು ಕೆಂಡ ಹಾಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.
ಇನ್ನು ಕಟ್ಟೆಕೈ ಹಾಲಬ್ಬ ಎಂದರೇ ಸುತ್ತೂರಿನ ಜನರಿಗೂ ಕೂಡ ವಿಶೇಷ. ಅದರಲ್ಲಿಯೂ ಹಬ್ಬದ ದಿನ ಬರಿ ಕಾಲಿನಲ್ಲಿ ದೇವರ ಪೆಟ್ಟಿಗೆ ಹಾಗೂ ದೇವರ ಮುಖಗಳನ್ನು ಹೊತ್ತುಕೊಂಡು ಕೆಂಡ ಹಾಯುವುದನ್ನು ನೋಡುವುದಕ್ಕಾಗಿಯೇ ಗ್ರಾಮಸ್ಥರಲ್ಲದೇ ಅಕ್ಕಪಕ್ಕದ ಊರಿನಿಂದ ನೂರಾರು ಮಂದಿ ಆಗಮಿಸಿದ್ದರು. ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಹಬ್ಬ ರೈತ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಒಟ್ಟಾರೆ ಕಟ್ಟೆಕೈ ಗ್ರಾಮದಲ್ಲಿ ವಿಶಿಷ್ಟವಾಗಿ ನಡೆಯುವ ಹಾಲಬ್ಬವೂ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಮೂರು ದಿನವೂ ಸ್ಥಳೀಯವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ತಾವು ಬೆಳೆದ ಹೊಸ ಬೆಳೆಯ ಫಲವನ್ನು ದೇವರಿಗೆ ನೈವೇದ್ಯ ಮಾಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಗಂಗಾವತಿಯಲ್ಲಿ ಮಹಿಳೆಯರಿಂದ ಹನುಮಾನ್ ತಾಂಡವ್ ಮಂತ್ರ ಪಠಣ