'ಕಾಂತಾರ 2 ಕೆಲಸ ಶುರು, ಮಾರ್ಚ್ನಿಂದ ಫೋನ್ ಆಫ್': ಫಾಲ್ಕೆ ಪ್ರಶಸ್ತಿ ಬಗ್ಗೆ ರಿಷಬ್ ಶೆಟ್ಟಿ ಹೀಗಂದ್ರು!
![ETV Thumbnail thumbnail](https://etvbharatimages.akamaized.net/etvbharat/prod-images/640-480-17812273-thumbnail-4x3-news.jpg)
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕಾಂತಾರ ಸಿನಿಮಾದ ಅಭಿನಯಕ್ಕಾಗಿ (ಹಿಂದಿ) ರಿಷಬ್ ಶೆಟ್ಟಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ಲಭಿಸಿದೆ. ಕಾಂತಾರ ಚಿತ್ರದ ಶಿವನ ಪಾತ್ರಕ್ಕೆ ಅತ್ಯಂತ ಭರವಸೆಯ ನಟ ಎಂಬ ಟೈಟಲ್ ಸಿಕ್ಕಿದೆ. ಸೋಮವಾರ ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ಸ್ವೀಕರಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇಂದು ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಅಭಿಮಾನಿಗಳು ಹೆಮ್ಮೆಯಿಂದ ಸ್ವಾಗತಿಸಿದರು. ರಿಷಬ್ ಅವರೊಂದಿಗೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು.
ಪ್ರಶಸ್ತಿ ಸ್ವೀಕರಿಸಿದ ಬಗ್ಗೆ ಮಾತನಾಡಿದ ನಟ ರಿಷಬ್ ಶೆಟ್ಟಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಿಂದಿ ಸಿನಿಮಾಗೆ (ಕಾಂತಾರ ಡಬ್) ಕೊಟ್ಟ ಪ್ರಶಸ್ತಿ ಆಗಿದೆ. ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕಿದ್ದು ಬಹಳ ಖುಷಿ ಕೊಟ್ಟಿದೆ. ಜೊತೆಗೆ ಜವಾಬ್ದಾರಿ ಕೂಡಾ ಹೆಚ್ಚಿಸಿದೆ. ಕನ್ನಡ ಸಿನಿಮಾಗಳಿಗೆ ವಿಶೇಷ ಗೌರವ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ರು. ಇನ್ನು ನಮ್ಮ ಟ್ರೆಡಿಷನ್ನಲ್ಲೇ (ಲುಂಗಿ) ಹೋಗಿದ್ದೆ. ಅಲ್ಲಿದ್ದವರೆಲ್ಲಾ ಗುರುತಿಸಿದ್ರು. ಇನ್ಮುಂದೆ ಕಾಂತಾರ 2 ಕೆಲಸ ಶುರು ಮಾಡುತ್ತೇನೆ. ಮಾರ್ಚ್ನಿಂದ ಫೋನ್ ಆಫ್ ಮಾಡುತ್ತೇನೆ ಎಂದುರು.
ಇದನ್ನೂ ಓದಿ: ಭರವಸೆಯ ನಟನಾಗಿ ಕಾಂತಾರ ಸ್ಟಾರ್: ಫಾಲ್ಕೆ ಪ್ರಶಸ್ತಿ 2023ರ ಸುಂದರ ಕ್ಷಣಗಳು