ಮೈಸೂರು ದಸರಾ: ಅಂತಿಮ ಹಂತದ ಕುಶಾಲತೋಪು ತಾಲೀಮು; ಜಂಬೂಸವಾರಿಗೆ ಗಜಪಡೆ ಸಿದ್ಧ
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg?imwidth=128)
Published : Oct 17, 2023, 4:45 PM IST
![ETV Thumbnail thumbnail](https://etvbharatimages.akamaized.net/etvbharat/prod-images/17-10-2023/640-480-19788847-thumbnail-16x9-mh.jpg)
ಮೈಸೂರು: ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ ಕೆಲವೇ ದಿನಗಳು ಬಾಕಿ. ಮಂಗಳವಾರ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಅಂತಿಮ ಹಂತದ ಕುಶಾಲತೋಪು ತಾಲೀಮು ನಡೆಯಿತು. ಈ ತಾಲೀಮಿನಲ್ಲಿ 12 ಆನೆಗಳು ಹಾಗೂ ಅಶ್ವದಳ ಭಾಗಿಯಾಗಿದ್ದವು.
ಡಿಸಿಎಫ್ ಸೌರವ್ ಕುಮಾರ್ ಮಾತನಾಡಿ, "ಇಂದು ಮೂರನೇ ಹಾಗೂ ಅಂತಿಮ ಹಂತದ ಕುಶಾಲತೋಪು ತಾಲೀಮಿನಲ್ಲಿ 12 ಆನೆಗಳನ್ನು ಕರೆತಂದಿದ್ದು, ಹೊಸ ಆನೆಗಳಾದ ಹೆಣ್ಣಾನೆ ಹಿರಣ್ಯ, ಗಂಡಾನೆ ರೋಹಿತ ಆನೆಗೆ ವಿಶ್ರಾಂತಿ ನೀಡಿದ್ದೇವೆ. ಈಗಾಗಲೇ ಮರದ ಅಂಬಾರಿ ತಾಲೀಮು, ಫಿರಂಗಿ ತಾಲೀಮು ನಡೆದಿದೆ. ಎಲ್ಲಾ ಆನೆಗಳು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿವೆ. ಸಿಡಿಮದ್ದು ಸಿಡಿಸುವ ಸಂದರ್ಭದಲ್ಲಿ ಕೆಲವು ಹೊಸ ಆನೆಗಳು ವಿಚಲಿತವಾಗಿದ್ದು, ಅವುಗಳನ್ನು ಮಾವುತರು ನಿಯಂತ್ರಿಸಿದರು. ಈ ಬಾರಿಯೂ ಜಂಬೂಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದೆ. ಕೆಲವೇ ದಿನಗಳಲ್ಲಿ ಇದರ ಜೊತೆಗೆ ಬೇರೆ ಯಾವ್ಯಾವ ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂಬುದನ್ನು ಅಂತಿಮಗೊಳಿಸಲಾಗುವುದು. ನಿನ್ನೆ ನಡೆದ ಶ್ರೀರಂಗಪಟ್ಟಣ ದಸರಾಗೆ ಮಹೇಂದ್ರ, ವಿಜಯ, ವರಲಕ್ಷ್ಮಿ ಭಾಗವಹಿಸಿದವು. ಇದರ ಜೊತೆಗೆ ಧನಂಜಯ ಹಾಗೂ ಭೀತಿ ಆನೆಗಳು ಪ್ರತಿನಿತ್ಯ ಅರಮನೆಯ ಶರನ್ನವರಾತ್ರಿಯ ಪೂಜೆಯಲ್ಲಿ ಪಟ್ಟದ ಆನೆ ಮತ್ತು ನಿಶಾನೆ ಆನೆಯಾಗಿ ಭಾಗವಹಿಸಿವೆ" ಎಂದರು.
ಇದನ್ನೂ ಓದಿ: ಅಂಬಾವಿಲಾಸ ಅರಮನೆ ಮುಂಭಾಗದ ಆವರಣದಲ್ಲಿ ರಂಗೋಲಿ ಸ್ಪರ್ಧೆ- ವಿಡಿಯೋ ನೋಡಿ