ಮದ್ಯಪಾನಕ್ಕೆ ಹಣ ಕೊಡಲಿಲ್ಲ ಎಂದು ಅಜ್ಜನನ್ನೇ ಕೊಂದ ಮೊಮ್ಮಗ
![ETV Thumbnail thumbnail](https://etvbharatimages.akamaized.net/etvbharat/prod-images/640-480-17752149-thumbnail-4x3-sa.jpg)
ಬೆಂಗಳೂರು: ಮದ್ಯಪಾನ ಸೇವನೆ ಮಾಡಲು ಹಣ ಕೊಡಲಿಲ್ಲವೆಂದು ಸಾಕಿ ಸಲಹಿದ್ದ ಅಜ್ಜನನ್ನ ಹತ್ಯೆಗೈದಿರುವ ಘಟನೆ ಫೆ.13ರ ರಾತ್ರಿ ಬಾಣಸವಾಡಿ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಸ್ಲಂ ನಲ್ಲಿ ನಡೆದಿದೆ. ಜೋಸೆಫ್ (54) ತನ್ನ ಮೊಮ್ಮಗ ಆ್ಯಂಟೋನಿಯಿಂದ ಹತ್ಯೆಯಾದ ದುರ್ದೈವಿ.
ಸಂಬಂಧದಲ್ಲಿ ಸಹೋದರಿಯ ಮೊಮ್ಮಗನಾದ ಆ್ಯಂಟೋನಿಯನ್ನ ಚಿಕ್ಕ ವಯಸ್ಸಿನಿಂದಲೂ ಜೋಸೆಫ್ ತಾನೇ ಸಾಕಿದ್ದ. ಇತ್ತೀಚಿನ ದಿನಗಳಲ್ಲಿ ಮದ್ಯಪಾನದ ಚಟಕ್ಕೆ ದಾಸನಾಗಿದ್ದ ಆ್ಯಂಟನಿ ಸೋಮವಾರ ರಾತ್ರಿ ಮದ್ಯಪಾನ ಮಾಡಲು ಹಣ ಕೊಡುವಂತೆ ತಾತ ಜೋಸೆಫ್ ಬಳಿ ಕೇಳಿದ್ದ. ಆ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದವಾಗಿತ್ತು. ಮದ್ಯದ ಅಮಲಿನಲ್ಲಿದ್ದ ಆ್ಯಂಟೋನಿ ದೊಣ್ಣೆಯಿಂದ ಜೋಸೆಫ್ಗೆ ಹಲ್ಲೆ ಮಾಡಿದ್ದ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಜೋಸೆಫ್ನನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜೋಸೆಫ್ ಮೃತಪಟ್ಟಿದ್ದಾನೆ.
ಆಸ್ಪತ್ರೆಯಿಂದ ಬಂದ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಬಾಣಸವಾಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಲು ಯತ್ನಿಸುತ್ತಿದ್ದ ಆ್ಯಂಟೋನಿಯನ್ನ ಆರ್.ಟಿ.ನಗರ ಬಳಿ ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ.. ಪಾದಚಾರಿ ಸಾವು..