ಸಾಗರದ ಗಣಪತಿ ಕೆರೆ ಪಕ್ಕದಲ್ಲಿ ಕಾರು ಪಲ್ಟಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು - ಸಾಗರದ ಗಣಪತಿ ಕೆರೆ ಬಳಿ
🎬 Watch Now: Feature Video


Published : Oct 10, 2023, 12:30 PM IST
ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಸಾಗರದ ಗಣಪತಿ ಕೆರೆ ಬಳಿ ಸೋಮವಾರ ರಾತ್ರಿ ನಡೆದಿದೆ. ಅದೃಷ್ಟವಶಾತ್ ಕಾರು ಕೆರೆದಂಡೆ ಮೇಲೆ ಬಿದ್ದಿದ್ದರಿಂದ ಸಂಭಾವ್ಯ ದುರಂತ ತಪ್ಪಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾಗರ ನಗರಸಭೆ ವ್ಯಾಪ್ತಿಯ ರಾಮನಗರದ ನಿವಾಸಿ ಲೋಕೇಶ್ ಎಂಬವರಿಗೆ ಸೇರಿದ ಮಾರುತಿ ಸುಜುಕಿ ಇಕೋ ಕಾರು ಇದಾಗಿದೆ. ಲೋಕೇಶ್ ಪುತ್ರ ಆಕಾಶ ಹಾಗೂ ಆತನ ಸ್ನೇಹಿತ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಸಾಗರದ ಅಗ್ರಹಾರ ಸರ್ಕಲ್ ಮೂಲಕ ಬಿಹೆಚ್ ರಸ್ತೆಯ ಗಣಪತಿ ಕೆರೆ ಮಾರ್ಗವಾಗಿ ಬರುತ್ತಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ. ರಸ್ತೆಯ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು, ಕೆರೆ ದಂಡೆಯ ಮೇಲೆ ಬಿದ್ದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಗಸ್ತು ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ. ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕುಡಿದು ಟೈಟ್: ಬೈಕ್ ಓಡಿಸಲಾಗದೇ ನಡು ರಸ್ತೆಯಲ್ಲೇ ಮಲಗಿದ ಭೂಪ - ವಿಡಿಯೋ