ಬಿಳಿಗಿರಿ ರಂಗನಾಥಸ್ವಾಮಿ ಸನ್ನಿಧಿಗೆ ವಿಜಯ್ ರಾಘವೇಂದ್ರ ಭೇಟಿ.. ಪುತ್ರನ ಹೆಸರಲ್ಲಿ ಅರ್ಚನೆ ಮಾಡಿಸಿದ ಚಿನ್ನಾರಿ ಮುತ್ತ
Published : Oct 4, 2023, 3:48 PM IST
ಚಾಮರಾಜನಗರ: ನಟ ವಿಜಯ್ ರಾಘವೇಂದ್ರ ಅಭಿನಯದ 'ಜೀನಿಯಸ್ ಮುತ್ತಾ' ಶೀರ್ಷಿಕೆಯ ಸಿನಿಮಾದ ಚಿತ್ರೀಕರಣ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥ ಬೆಟ್ಟದಲ್ಲಿ ನಡೆಯುತ್ತಿದೆ. ಇಂದು ನಟ ವಿಜಯ್ ರಾಘವೇಂದ್ರ ಮತ್ತು ಸಹ ಕಲಾವಿದರು ಬಿಳಿಗಿರಿ ರಂಗನಾಥಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದಲ್ಲಿ ನಟ ವಿಶೇಷ ಪೂಜೆ ಸಲ್ಲಿಸಿದರು. ಪುತ್ರ ಶೌರ್ಯ ಹೆಸರಲ್ಲಿ ಅರ್ಚನೆ ಮಾಡಿಸಿದರು.
ಬಳಿಕ 10 ನಿಮಿಷ ದೇವಾಲಯದಲ್ಲಿ ಕುಳಿತು ಅವರು ಧ್ಯಾನ ಮಾಡಿದರು. ಬಿಳಿಗಿರಿ ರಂಗನಾಥಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ, ದಾಸೋಹ ಭವನದಲ್ಲಿ ಪ್ರಸಾದ ಸೇವಿಸಿ ತೆರಳಿದರು. ಮೆಚ್ಚಿನ ನಟನನ್ನು ಕಂಡ ಕೂಡಲೇ ಬಿಳಿಗಿರಿ ರಂಗನಾಥ ಬೆಟ್ಟಕ್ಕೆ ಬಂದಿದ್ದ ಭಕ್ತರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನಿರ್ದೇಶಕ ನಾಗಾಭರಣ, ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಸೆಟ್ಟೇರಿತು ರಜನಿಕಾಂತ್ ಮುಖ್ಯಭೂಮಿಕೆಯ 'ತಲೈವರ್ 170'...ಅಭಿಮಾನಿಗಳಲ್ಲಿ ಕುತೂಹಲ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ನಟ ವಿಜಯ್ ರಾಘವೇಂದ್ರ ಗುರುತಿಸಿಕೊಂಡಿದ್ದಾರೆ. ಸದ್ಯ ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದೀಗ ಚಾಮರಾಜನಗರದಲ್ಲಿ 'ಜೀನಿಯಸ್ ಮುತ್ತಾ' ಚಿತ್ರೀಕರಣ ಭರದಿಂದ ಸಾಗುತ್ತಿದೆ.