ಗುರುಮಠಕಲ್: ನೆರೆಯ ತೆಲಂಗಾಣ ಸಾರಿಗೆ ಸಂಸ್ಥೆಯ ಸಿಬ್ಬಂದಿ ಕರ್ನಾಟಕದ ಸಿಬ್ಬಂದಿಯೊಡನೆ ಗೂಂಡಾವರ್ತನೆ ತೋರಿದ್ದು, ರಾಜ್ಯದ ಸಿಬ್ಬಂದಿಗಳಿಗೆ ಅಭದ್ರತೆಯ ಭಾವ ಮೂಡುವಂತಾಗಿದೆ.
ಶುಕ್ರವಾರ ಬೆಳಗ್ಗೆ ತೆಲಂಗಾಣ ಸಾರಿಗೆ ಸಿಬ್ಬಂದಿ ಪಟ್ಟಣದ ಬಸ್ ನಿಲ್ದಾಣದಿಂದ ಕಂಟ್ರೋಲರ್ ಅವರನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಕರ್ನಾಟಕದಿಂದ ತೆಲಂಗಾಣ ಮಾರ್ಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಲಾಗುತ್ತಿದೆ.
ಬೆ.6-45ಕ್ಕೆ ಬರಬೇಕಿದ್ದ ತೆಲಂಗಾಣದ ಪರಗಿ ಘಟಕದ ಬಸ್ ಮುಂಚಿತವಾಗಿ ಬಂದು ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಕುಳಿತಿದ್ದ ಪ್ರಯಾಣಕರನ್ನು ಪುಸಲಾಯಿಸಿ ತಮ್ಮ ಬಸ್ ಹತ್ತಿಸಿಕೊಳ್ಳುವ ಯತ್ನ ಮಾಡುತ್ತಿರುವುದನ್ನು ಪ್ರಶ್ನಿಸಿದ ಕಂಟ್ರೋಲರ್ ಮಧುಸೂಧನ್ ಅವರನ್ನು ಅಪಹರಿಸಲು ಯತ್ನಿಸಲಾಗಿದೆ.
"ನಿಗದಿತ ಅವಧಿಗೂ ಮೊದಲೇ ಬಂದು ನಮ್ಮ ಬಸ್ನಲ್ಲಿದ್ದವರನ್ನು ಯಾಕೆ ಹೀಗೆ ಕರೆಯುತ್ತೀರಿ? ನಿಮ್ಮ ಸಮಯಕ್ಕೆ ನೀವು ಪ್ರಯಾಣಿಕರನ್ನು ಕರೆಯಿರಿ." ಎಂದು ಮಧುಸೂಧನ್ ಹೇಳಿದಾಗ ಅವರೊಡನೆ ವಾಗ್ವಾದಕ್ಕಿಳಿದ ತೆಲಂಗಾಣ ಬಸ್ ಕಂಡಕ್ಟರ್ ಮತ್ತು ಡ್ರೈವರ್ ತಮ್ಮ ಬಸ್ನಲ್ಲಿ ಕಂಟ್ರೋಲರ್ ಅವರನ್ನು ಅಪಹರಿಸುವ ಯತ್ನ ಮಾಡಿದ್ದಾರೆ.
ಬಸ್ನಲ್ಲಿ ಕಂಟ್ರೋಲರ್ ಅವರನ್ನು ಹತ್ತಿಸಿಕೊಂಡು ಸುಮಾರು ಅರ್ಧ ಕಿ.ಮೀ. ವರೆಗೆ ವೇಗವಾಗಿ ಚಲಾಯಿಸಿದ್ದ ತೆಲಂಗಾಣ ಬಸ್ಗೆ ಬಿಡಾಡಿ ದನಗಳು ಅಡ್ಡ ಬಂದಿದ್ದರಿಂದ ಹಿಂದಿನಿಂದ ಬಂದ ಸ್ಥಳೀಯರು ಕಂಟ್ರೋಲರ್ ಅವರನ್ನು ಬಸ್ನಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿದೆ ಎನ್ನಲಾಗಿದೆ.
ಇಷ್ಟೆಲ್ಲ ನಡೆದರೂ ಸಹ ಕರ್ನಾಟಕದ ಸಿಬ್ಬಂದಿಯೊಡನೆ ತೆಲಂಗಾಣ ಸಾರಿಗೆ ಸಿಬ್ಬಂದಿಯು ಅವಾಚ್ಯವಾಗಿ ಮಾತನಾಡುತ್ತಲೇ ಇದ್ದಾರೆ. ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ವೈಫಲ್ಯದಿಂದಲೇ ಇಷ್ಟೆಲ್ಲ ಧೈರ್ಯವಾಗಿ ಅವರು ವರ್ತಿಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯಲ್ಲಿ ಕಂಟ್ರೋಲರ್ ಮಧುಸೂದನ್ ಅವರ ಮೊಬೈಲ್ ಕಳೆದು ಹೋಗಿದ್ದು, ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.
"ಇಂದಿನ ಪ್ರಕರಣವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಸಿದ್ದು, ನಾಳೆಯಿಂದ ತೆಲಂಗಾಣದ ಅನಧಿಕೃತ ಬಸ್ ಸಂಚಾರವನ್ನು ನಿಯಂತ್ರಿಸಲಾಗುತ್ತದೆ." ಎಂದು ವ್ಯವಸ್ಥಾಪಕ ಎಸ್.ಟಿ. ರಾಠೋಡ್ ತಿಳಿಸಿದ್ದಾರೆ.