ಯಾದಗಿರಿ/ಸುರಪುರ: 10 ದಿನದ ಹಸುಗೂಸು ಹೊಂದಿರುವ ಬಾಣಂತಿ ಮತ್ತು ಆಕೆಯ ಕುಟುಂಬಸ್ಥರು ಬೀದಿ ಬದಿಯೇ ವಾಸವಾಗಿದ್ದರು. ಈ ಕುರಿತು ಬುಧವಾರ ಈಟಿವಿ ಭಾರತ ಬಿತ್ತರಿಸಿದ್ದ ವಿಸ್ತೃತ ವರದಿಗೆ ಫಲ ಸಿಕ್ಕಿದೆ. ವರದಿ ನೋಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಈ ಕುಟುಂಬಕ್ಕೆ ಅಗತ್ಯ ನೆರವು ನೀಡಿದ್ದಾರೆ.
ನಗರದ ಕುಂಬಾರಪೇಟೆಯ ವಾಟರ್ ಫಿಲ್ಟರ್ ಟ್ಯಾಂಕ್ ಕೆಳಗೆ ಜೀವನ ನಡೆಸುತ್ತಿದ್ದ ಹೈದರಾಬಾದ್ ಮೂಲದ ಕುಟುಂಬದ ಕಷ್ಟದ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ವರದಿ ನೋಡಿದ ತಕ್ಷಣವೇ ಸ್ಪಂದಿಸಿದ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಅಧಿಕಾರಿಗಳು ಸಂತ್ರಸ್ತ ಕುಟುಂಬಕ್ಕೆ ನೆರವಿನ ಭರವಸೆ ನೀಡಿ, ಧೈರ್ಯ ತುಂಬಿದ್ದಾರೆ.
ಕೊರೊನಾ ತಂದ ಸಂಕಷ್ಟ: ಹತ್ತು ದಿನದ ಹಸುಗೂಸಿನ ಜೊತೆ ನೀರಿನ ಟ್ಯಾಂಕ್ ಬಳಿ ಕುಟುಂಬದ ವಾಸ!
ತನ್ನ ಮಾವನ ಮನೆಯಿಂದ ಹೊರಬಂದು ಲಾಕ್ಡೌನ್ ಆದೇಶದಿಂದ ಮರಳಿ ಊರಿಗೆ ಹೋಗಲಾಗದೆ ಈ ಕುಟುಂಬ ಒದ್ದಾಡುತ್ತಿತ್ತು. ಅಧಿಕಾರಿ ಲಾಲ್ಸಾಬ್ ಪೀರಾಪುರ ಅವರು ಈ ಕುಟುಂಬಕ್ಕೆ ಅಗತ್ಯ ವಸ್ತುಗಳು ಮತ್ತು ಆಹಾರ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಕುಟುಂಬದ ವಾಸಕ್ಕೆ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ.
ಈಟಿವಿ ಭಾರತ ವರದಿಗೆ ಸ್ಪಂದಿಸಿ, ಬಡ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದಿರುವ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ.