ಯಾದಗಿರಿ : ನಗರದ ಹೊಸ ಬಸ್ ನಿಲ್ದಾಣದಲ್ಲಿನ ಶೌಚಾಲಯದ ಸೇಫ್ಟಿ ಟ್ಯಾಂಕ್ ಗುಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಸಂಭವಿಸಿದೆ. ಬಸ್ ಡಿಪೋ ಹಿಂದಿರುವ ಆಶ್ರಯ ಕಾಲೋನಿಯ ನಿವಾಸಿ ಹಣಮಂತ ಶಿಳ್ಳೇಕ್ಯಾತ (10) ಮೃತ ಬಾಲಕ.
ಸಂಬಂಧಿಯೊಬ್ಬರು ಊರಿಂದ ಬರುವ ಸುದ್ದಿ ತಿಳಿದು ಬಸ್ ನಿಲ್ದಾಣಕ್ಕೆ ಹೋಗುವಾಗ ಕಾಲು ಜಾರಿ ಬಿದ್ದು ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ತಗುಲಿ ಕುರಿಗಾಹಿ ಸಾವು : ಜಮೀನವೊಂದರಲ್ಲಿ ಕುರಿಗಳನ್ನು ಮೇಯಿಸುವಾಗ ವಿದ್ಯುತ್ ಕಂಬದ ಸರ್ವೀಸ್ ತಂತಿ ತಗುಲಿ ಸ್ಥಳದಲ್ಲೇ ಕುರಿಗಾಹಿ ಬಾಲಕನೊಬ್ಬ ಮೃತಪಟ್ಟ ಘಟನೆ ಸುರಪುರ ತಾಲೂಕಿನ ಜಾಲಿಬೆಂಚಿ ಸೀಮಾಂತರದಲ್ಲಿ ಸಂಭವಿಸಿದೆ. ಮಾಚಿಗುಂಡಾಳ ಗ್ರಾಮದ ದೇವಪ್ಪ ಜಾಲಿಬೆಂಚಿ ಮೃತ ಬಾಲಕ. ಎಂದಿನಂತೆ ಕುರಿಗಳನ್ನು ಮೇಯಿಸಲು ಜಾಲಿಬೆಂಚಿ ಸೀಮಾಂತರ ಪ್ರದೇಶದಲ್ಲಿ ಹೋದಾಗ ಈ ದುರ್ಘಟನೆ ನಡೆದಿದೆ. ಮೃತನ ತಂದೆ ಸಿದ್ದಪ್ಪ ಕಾಮಣ್ಣ ಜಾಲಿಬೆಂಚಿ ದೂರಿನನ್ವಯ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.