ವಿಜಯಪುರ:ಬತ್ತಿದ್ದ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. 1,850 ಕ್ಯೂಸೆಕ್ ನೀರನ್ನು ಮಹಾರಾಷ್ಟ್ರ ಸರ್ಕಾರ ಭಿಮಾ ನದಿಗೆ ಬಿಟ್ಟಿದೆ.
ಮಹಾರಾಷ್ಟ್ರದ ಸೊಲ್ಲಾಪುರ ನಗರ ಹಾಗೂ ಅಕ್ಕಲಕೋಟ ಪಟ್ಟಣಕ್ಕೆ ಕುಡಿಯಲು ನೀರು ಹರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ ಭೀಮಾ ನದಿಗೆ ಉಜನಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ವಿಜಯಪುರ ಜಿಲ್ಲೆಯ ಚಡಚಣ ಹಾಗೂ ಇಂಡಿ ತಾಲೂಕಿನ ಕೆಲ ಗ್ರಾಮದ ಜನರಿಗೆ ಈ ನೀರು ಅನುಕೂಲವಾಗಲಿದೆ. ಬೇಸಿಗೆ ಆರಂಭದ ಮುನ್ನವೇ ಇಂಡಿ ತಾಲೂಕಿನ ಕೆಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದರು. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಟ್ಟಿರುವುದು ಸಂತಸ ತಂದಿದೆ.
ಭೀಮಾ ತಟದ ದಸೂರ್, ಉಮರಜ, ಗೋವಿಂದಪುರ, ರೇವತಗಾಂವ್, ಹೊಳೆಸಂಖ, ಉಮರಾಣಿ ಹಾಗೂ ಟಾಕಳಿ ಸೇರಿದಂತೆ ವಿವಿಧ ಗ್ರಾಮಗಳ ಜನ, ಜಾನುವಾರುಗಳಿಗೆ ನೀರು ಉಪಯೋಗವಾಗಲಿದೆ.