ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಹೈಸ್ಕೂಲ್ ಮುಂಭಾಗದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಟಿಪ್ಪರ್ ವೊಂದು ಡಿಕ್ಕಿ ಹೊಡೆದು ಧಕ್ಕೆಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ದಿಢೀರ್ ಪ್ರತಿಭಟನೆಗೆ ಮುಂದಾದರು.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಘಮೋಡೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಮುಂದಾಗಿದ್ದವರ ಜೊತೆಗೆ ಮಾತುಕತೆ ನಡೆಸಲು ಮುಂದಾದರು.
ಈ ವೇಳೆ ಮಾತನಾಡಿದ ಮುಖಂಡರಾದ ಸಂಗಣ್ಣ ಮೇಲಿನಮನಿ, ವಕೀಲ ಸಿದ್ದನಗೌಡ ಬಿರಾದಾರ, ಪರಶುರಾಮ ನಾಗರಬೆಟ್ಟ, ಕುರುಬರ ಸಂಘದ ಉಪಾಧ್ಯಕ್ಷ ಸಂತೋಷ ನಾಯ್ಕೋಡಿ ಮೊದಲಾದವರು, ಸಂಗೊಳ್ಳಿ ರಾಯಣ್ಣ ವೃತ್ತದ ಬಗ್ಗೆ ಪುರಸಭೆ ಆಡಳಿತ ನಿರ್ಲಕ್ಷ ವಹಿಸಿದೆ. ರಸ್ತೆ ಕಾಮಗಾರಿ ಮಾಡುವ ಗುತ್ತಿಗೆದಾರರ ಕಡೆಯುವರು ವೃತ್ತ ಮರುನಿರ್ಮಾಣ ಮಾಡುವುದಾಗಿ ಹೇಳಿದ್ದರೂ ಕೆಳಮಟ್ಟದಲ್ಲಿಯೇ ಇತ್ತು. ಇಂದು ವಾಹನ ಹಾಯ್ದು ಕಂಬ ಮುರಿದಿದೆ. ಇದರಿಂದ ರಾಯಣ್ಣನ ಅಭಿಮಾನಿಗಳಿಗೆ ನೋವಾಗಿದೆ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಘಮೋಡೆ, ಪುರಸಭೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ .ರಸ್ತೆ ಕಾಮಗಾರಿ ನಡೆಸುವ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ವೃತ್ತದ ಮರುನಿರ್ಮಾಣ ಮಾಡಲಾಗುತ್ತದೆ ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಿದರು.
ಇದಕ್ಕೆ ಸಹಮತ ವ್ಯಕ್ತಪಡಿಸದ ಪ್ರತಿಭಟನಾಕಾರರು ಮೊದಲು ಇದ್ದ ಸ್ಥಳದಲ್ಲಿಯೇ ವೃತ್ತದ ಮರು ನಿರ್ಮಾಣಕ್ಕೆ ಒತ್ತಾಯಿಸಿ ಕೆಲಸ ಆರಂಭಿಸುವಂತೆ ಪಟ್ಟು ಹಿಡಿದರು.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಬೆಳವಣಿಗೆಗಳ ನಂತರ ವೃತ್ತವನ್ನು ಮರುನಿರ್ಮಾಣ ಮಾಡುವುದಾಗಿ ತಿಳಿಸಿದ ಅಧಿಕಾರಿಗಳು ಗುತ್ತಿಗೆದಾರರ ಕಡೆಯಿಂದ ಜೆಸಿಬಿ ತರಿಸಿ ಪ್ರತಿಭಟನಾಕಾರರ ಮುಂದೆಯೇ ವೃತ್ತ ತೆರವುಗೊಳಿಸಿ ವಿವಾದಕ್ಕೆ ತೆರೆ ಎಳೆಯಲಾಯಿತು.
ಈ ವೇಳೆ ಪುರಸಭೆ ಕಂದಾಯಾಧಿಕಾರಿ ಎಂ.ಬಿ.ಮಾಡಗಿ, ಮಹಾಂತೇಶ ಕಟ್ಟೀಮನಿ ಮತ್ತಿತರರು ಇದ್ದರು.