ವಿಜಯಪುರ : ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಹಾಗೂ ಮದುವೆ ಕಾರ್ಯಕ್ರಮಗಳಿಗೆ 200 ರಿಂದ 300 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಮಂಟಪ, ಡೆಕೊರೇಟರ್, ಸೌಂಡ್ ಸಿಸ್ಟಮ್ ಮಾಲೀಕರ ಸಂಘಟನೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕೊರೊನಾ ವೈರಸ್ ಭೀತಿಯಿಂದ ಕಾರ್ಯಕ್ರಮಗಳಿಲ್ಲದೆ ಹಾಗೂ ದುಡಿಮೆಯಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಶಾಮಿಯಾನ ಮಾಲೀಕರಿಗೆ ಸರ್ಕಾರ ಸರಿಯಾಗಿ ಪರಿಹಾರ ಒದಗಿಸಲು ಮುಂದಾಗಿಲ್ಲ. ದುಡಿಮೆ ನಂಬಿ ಮಾಡಿಕೊಂಡ ಸಾಲ ಮರುಪಾವತಿ ಮಾಡಲಾಗುತ್ತಿಲ್ಲ. ಕುಟುಂಬ ನಿರ್ವಹಣೆ ಮಾಡಲು ಪರದಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ಲಾಕ್ಡೌನ್ ತೆರವಿನ ಬಳಿಕವೂ ದುಡಿಮೆಯಿಂದ ಆದಾಯ ಬರುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇತ್ತ ಜಿಲ್ಲಾಡಳಿತ ವಿಧಿಸಿದ ನಿಯಮಗಳು ಶಾಮಿಯಾನ ನಡೆಸುವ ಮಾಲೀಕರ ಆದಾಯಕ್ಕೆ ಕೊಕ್ಕೆ ಹಾಕುತ್ತಿವೆ. ಮಕ್ಕಳ ಶಾಲಾ ಫೀಸ್ ಕಟ್ಟಲು ಹಿಂದುಮುಂದು ನೋಡಬೇಕಾದ ಅನಿವಾರ್ಯತೆ ಬಂದಿದೆ. ಜಿಲ್ಲಾಡಳಿತ ಸಾರ್ವಜನಿಕ ಕಾರ್ಯಕ್ರಮಗಳಿಗೆ ವಿಧಿಸಿದ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಮದುವೆ, ಸಭೆ-ಸಮಾರಂಭಗಳಲ್ಲಿ ಕೇವಲ ಬೆರಳೆಣಿಕೆ ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಿದ ಪರಿಣಾಮ ಇಂದು ಶಾಮಿಯಾನ ಮಾಲೀಕರಿಗೆ ದುಡಿಮೆಯಾಗುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 200 ರಿಂದ 300 ಜನರಿಗೆ ಭಾಗಿಯಾಗಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು.