ಮುದ್ದೇಬಿಹಾಳ : ಹೊಸ ವರ್ಷದಂದು ಸರ್ಕಾರ ಶಾಲೆಗಳನ್ನು ತೆರೆಯುವಂತೆ ಆದೇಶ ನೀಡಿದ್ದು, ಪಟ್ಟಣದ ಕೆಬಿಎಂಪಿಎಸ್ ಶಾಲೆ, ಸರ್ಕಾರಿ ಪ್ರೌಢಶಾಲೆ, ಆರ್ಎಂಎಸ್ಎ ಶಾಲೆಗಳು ಇಂದು ಆರಂಭಗೊಂಡವು. ಇಂದು ಈ ಶಾಲೆಗಳಿಗೆ ಭೇಟಿ ನೀಡಿದ ಬಿಇಓ, ಮಕ್ಕಳಿಗೆ ಗುಲಾಬಿ ಹೂ ಕೊಟ್ಟು ಶಾಲೆಗೆ ಸ್ವಾಗತಿಸಿದರು.
ಕಳೆದ ಎಂಟು ತಿಂಗಳಿಂದ ಶಾಲೆಗಳಿಲ್ಲದೇ ಮನೆಯಲ್ಲಿಯೇ ಕೂತು ಬೇಸರವಾಗಿದ್ದ ವಿದ್ಯಾರ್ಥಿಗಳು ಇಂದು ಲವಲವಿಕೆಯಿಂದಲೇ ಶಾಲೆಗೆ ಆಗಮಿಸಿ ಶಿಕ್ಷಕರು, ಸ್ನೇಹಿತರೊಂದಿಗೆ ಪರಸ್ಪರ ಶಾಲಾ ಆರಂಭದ ಕುರಿತು ಚರ್ಚೆ ಮಾಡಿದರು.
ತಾಲೂಕಿನ ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಕುಂಟೋಜಿ ಹಿರೇಮಠದ ಚೆನ್ನವೀರ ದೇವರು, ಗವಿಮಠದ ಸಿದ್ಧಲಿಂಗ ಶ್ರೀಗಳು, ವಿದ್ಯಾರ್ಥಿಗಳಿಗೆ ಹೂ, ಸಿಹಿ ವಿತರಣೆ ಮಾಡಿ ಕೊರೊನಾ ವೈರಸ್ ಭೀತಿಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕುಂಟೋಜಿ ಚೆನ್ನವೀರ ದೇವರು, ಸರ್ಕಾರ ಶಾಲೆಗಳನ್ನು ಆರಂಭಿಸುವ ನಿರ್ಧಾರ ಸ್ವಾಗತಾರ್ಹ. ಪಾಲಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಬೇಕು. ಯಾವುದೇ ಭಯ, ಭೀತಿ, ಆತಂಕ ಇಲ್ಲದೇ ಮಕ್ಕಳನ್ನು ವಿದ್ಯಾಗಮ ತರಗತಿ ಹಾಗೂ ಪ್ರೌಢಶಾಲೆಗಳಿಗೆ ಕಳುಹಿಸಿಕೊಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ ಮಾತನಾಡಿ, ಸರ್ಕಾರದ ಮಾರ್ಗಸೂಚಿಯ ಅನ್ವಯ ಮಕ್ಕಳನ್ನು ಕೋವಿಡ್-19 ವೈರಸ್ನಿಂದ ರಕ್ಷಣೆಗೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಆ ಮೂಲಕ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.