ಮುದ್ದೇಬಿಹಾಳ : ಸರ್ಕಾರಿ ಶಾಲಾ ಮಕ್ಕಳನ್ನು ಪಿಕ್ನಿಕ್ಗೆ ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲ್ಸ್ ಪಲ್ಟಿಯಾದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶಿಕ್ಷಕರು ಸೇರಿದಂತೆ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಳಿಕೋಟೆ ತಾಲೂಕಿನ ಕೂಚಬಾಳ-ಬಾವೂರ ಬಳಿ ನಡೆದಿದೆ.
ತಾಳಿಕೋಟೆ ತಾಲೂಕಿನ ಚೊಕಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟ್ರಾವೆಲ್ಸ್, ತಾಲೂಕಿನ ಕೂಚಬಾಳ-ಬಾವೂರ ಮಧ್ಯೆ ಏಕಾಏಕಿಯಾಗಿ ಪಲ್ಟಿ ಆಗಿದೆ. ಪರಿಣಾಮ ಕ್ಲೀನರ್ ದಾವಲಸಾಬ ಅಲ್ಲಿಸಾಬ ಸಾಲವಾಡಗಿ (40) ಎಂಬುವರು ಸಾವನ್ನಪ್ಪಿದ್ದಾರೆ.
ಒಟ್ಟು ಬಸ್ನಲ್ಲಿ 40 ಮಕ್ಕಳಿದ್ದು, 30ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಳುಗಳನ್ನು ತಮದಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೇ ಶಾಲಾ ಮಕ್ಕಳನ್ನ ಪಿಕ್ನಿಕ್ಗೆ ಕರೆದೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ ಮುಖ್ಯ ಶಿಕ್ಷಕರಿಗೆ ನೋಟಿಸ್ : ಶಾಲಾ ಮಕ್ಕಳನ್ನು ಪಿಕ್ನಿಕ್ಗೆ ಕರೆದೊಯ್ಯುವ ವೇಳೆ ಅನುಸರಿಸಬೇಕಿದ್ದ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆ ಶಾಲೆಯ ಮುಖ್ಯ ಶಿಕ್ಷಕರಿಗೆ ಈ ಕುರಿತು ನೋಟಿಸ್ ಜಾರಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಬಿಇಒ ಹೆಚ್ ಜಿ ಮಿರ್ಜಿ ತಿಳಿಸಿದ್ದಾರೆ.