ವಿಜಯಪುರ: ಕೊರೊನಾ ಆತಂಕದಿಂದ ದೇಶದಲ್ಲಿ ಲಾಕ್ಡೌನ್ ಜಾರಿಯಾದಾಗಿನಿಂದ ಕೊಂಚಿ ಕೊರವರ ಬದುಕು ಬೀದಿಗೆ ಬಂದಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ತತ್ತರಿಸಿ ಹೋಗಿದ್ದು, ಆರ್ಥಿಕ ಸಂಕಷ್ಟ ಅನುಭಿಸುತ್ತಿದ್ದಾರೆ.
ವಿಜಯಪುರದ ಸ್ಟೇಷನ್ ರಸ್ತೆಯಲ್ಲಿರುವ ಕೊಂಚಿ ಕೋರವ ಬಡಾವಣೆ ಜನರು, ಪೊರಕೆ ತಯಾರಿಸಿ ಊರೂರು ಸುತ್ತಿ ಮಾರಾಟ ಮಾಡಿ ಬಂದ ಹಣದಿಂದ ಜೀವನ ಮಾಡುತ್ತಿದ್ದರು. ಮಹಿಳೆಯರು ಪ್ರತಿದಿನ 50ಕ್ಕೂ ಅಧಿಕ ಪೊರಕೆಗಳನ್ನು ತಯಾರಿಸಿ ಕುಟುಂಬಗಳಿಗೆ ಆರ್ಥಿಕ ಬೆನ್ನೆಲುಬು ಆಗಿದ್ರು. ಯಾವಾಗ ಕೊರೊನಾ ವೈರಸ್ ದೇಶಕ್ಕೆ ವಕ್ಕರಿಸಿತೋ ಅಂದಿನಿಂದ ಅವರ ಜೀವನ ಅಸ್ತವ್ಯಸ್ತವಾಗಿದೆ.
ಮಾರಾಟ ಮಾಡಲಾಗದೇ ಮನೆಗಳ ಮುಂದೆ ಪೊರಕೆಗಳ ರಾಶಿಯ ಗುಡ್ಡೆಯೇ ಇದೆ. ಈ ಬಡವಣೆಯ 600ಕ್ಕೂ ಅಧಿಕ ಜನರು ಪೊರಕೆ ವ್ಯಾಪಾರದಿಂದ ಜೀವನ ಸಾಗಿಸುತ್ತಿದ್ದಾರೆ. ಪೊರಕೆ ಮಾರಾಟ ಮಾಡಲು ಹೋದಾಗ ಕೆಲ ಹಳ್ಳಿ ಜನರು ಜೋಳ, ಅಕ್ಕಿ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ನೀಡ್ತಿದ್ರು. ಇದೀಗ ವ್ಯಾಪಾರ ಸ್ಥಗಿತವಾಗಿದ್ದು, ಅದು ಕೂಡ ಇಲ್ಲವಾಗಿದೆ.