ಮುದ್ದೇಬಿಹಾಳ: ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕೆ ಗ್ರಾಮೀಣ ಪ್ರದೇಶದಲ್ಲೂ ಸ್ವಯಂ ಲಾಕ್ಡೌನ್ಗೆ ಗ್ರಾಮಸ್ಥರು ಮುಂದಾಗುತ್ತಿದ್ದು, ಪಟ್ಟಣದ ಸಮೀಪದಲ್ಲಿ ಬರುವ ಕುಂಟೋಜಿ ಗ್ರಾಮಸ್ಥರು ಆ. 1ರಿಂದ 10ರವರೆಗೆ ಸ್ವಯಂ ಲಾಕ್ಡೌನ್ ಮಾಡಲು ತೀರ್ಮಾನಿಸಿದ್ದಾರೆ.
ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿದ ಗ್ರಾಮಸ್ಥರು ಕೊರೊನಾ ವ್ಯಾಪಿಸುತ್ತಿರುವ ಸಲುವಾಗಿ ಮುದ್ದೇಬಿಹಾಳ ಪಟ್ಟಣ ಆ. 1ರಿಂದ 10ರವರೆಗೆ ಸ್ವಯಂ ಲಾಕ್ಡೌನ್ ಇದ್ದು, ಪಟ್ಟಣ ಬಂದ್ ಇರುವ ಕಾರಣ ಜನ ಹಳ್ಳಿಗಳತ್ತ ಮುಖ ಮಾಡುವುದು ಸಾಮನ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮವನ್ನು ಸ್ವಯಂ ಲಾಕ್ಡೌನ್ ಮಾಡುವುದು ಒಳಿತು ಎಂಬ ಅಭಿಪ್ರಾಯವನ್ನು ಗ್ರಾಮದ ಹಿರಿಯರು ವ್ಯಕ್ತಪಡಿಸಿದರು.
ವ್ಯಾಪಾರಸ್ಥರು ಹತ್ತು ದಿನಗಳ ಕಾಲ ಅಂಗಡಿಗಳನ್ನು ಬಂದ್ ಮಾಡುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು. ಮೆಡಿಕಲ್ ಶಾಪ್ ಹೊರತುಪಡಿಸಿ ಗ್ರಾಮವನ್ನು ಸಂಪೂರ್ಣ ಲಾಕ್ಡೌನ್ ಮಾಡಲು ಒಪ್ಪಿಗೆ ಸೂಚಿಸಿದರು. ಹಾಲು ಮಾರಾಟಕ್ಕೆ ಬೆಳಿಗ್ಗೆ 6ರಿಂದ 8ರವರೆಗೆ ಅವಕಾಶ ಕಲ್ಪಿಸುವುದು, ತರಕಾರಿಯನ್ನು ಮನೆ ಮನೆಗೆ ತೆರಳಿ ಮಾರಟ ಮಾಡಲು ಅವಕಾಶ ಕಲ್ಪಿಸಿ ಉಳಿದೆಲ್ಲವನ್ನು ಹತ್ತು ದಿನಗಳ ಕಾಲ ಬಂದ್ ಮಾಡಲು ನಿರ್ಧರಿಸಲಾಯಿತು.