ವಿಜಯಪುರ: ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ರಿಟ್ ಪಿಟಿಷನ್ ಅರ್ಜಿ ವಜಾಗೊಳಿಸಿ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಮೂಲಕ ಮಹಾನಗರ ಪಾಲಿಕೆ ಚುನಾವಣೆಗೆ ಆವರಿಸಿದ್ದ ಕಾರ್ಮೋಡ ಸರಿದಿದ್ದು, ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ ಆಕಾಂಕ್ಷಿ ಅಭ್ಯರ್ಥಿಗಳು ನಿರಾಳರಾಗಿದ್ದಾರೆ.
ಇದೇ ಅಕ್ಟೋಬರ್ 28 ಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿತ್ತು. ಕಳೆದ ಸಪ್ಟೆಂಬರ್ 27 ಕ್ಕೆ ಸಲ್ಲಿಕೆಯಾಗಿದ್ದ ರಿಟ್ ಪಿಟೀಷನ್ ವಜಾಗೊಳಿಸಿ ಕಲಬುರಗಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಿಗದಿಯಂತೆ ನಡೆಯಲಿದೆ.
ಅರ್ಜಿ ವಜಾ : ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ದೀಪಾ ಕುಂಬಾರ, ಮಾಜಿ ಪಾಲಿಕೆ ಸದಸ್ಯರಾದ ಮೈನುದ್ದೀನ್ ಬೀಳಗಿ, ಇದ್ರೂಸ್ ಭಕ್ಷಿ ಅವರಿಂದ ರಿಟ್ ಪಿಟೀಷನ್ ಸಲ್ಲಿಕೆಯಾಗಿತ್ತು. ಮೂರು ಬಾರಿ ಸುದೀರ್ಘ ವಿಚಾರಣೆ ನಡೆಸಿದ್ದ ಕಲಬುರಗಿ ಹೈಕೋರ್ಟ್ ನ್ಯಾಯ ಮೂರ್ತಿಗಳು ನಿನ್ನೆ ಅಂತಿಮ ಹಂತದ ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂದು ರಿಟ್ ಪಿಟೀಷನ್ ವಜಾಗೊಳಿಸಿ ನ್ಯಾಯ ಮೂರ್ತಿ ದೇವದಾಸ ಅವರು ಆದೇಶ ಹೊರಡಿಸಿದ್ದಾರೆ.
ರಿಟ್ ಪಿಟಿಷನ್ನಲ್ಲಿ ಏನಿತ್ತು: ನೂತನ ಪರಿಷೃತ ಮೀಸಲಾತಿ ಪಟ್ಟಿಯಲ್ಲಿ ಶೇಕಡಾ 50 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಿಲ್ಲ ಅವೈಜ್ಞಾನಿಕ ವಾರ್ಡ್ಗಳ ವಿಂಗಡನೆ ಮಾಡಲಾಗಿದೆ. 26 ವಾರ್ಡ್ಗಳಲ್ಲಿ ಮೀಸಲಾತಿ ಬದಲಾವಣೆ ಹಾಗೂ ಇತರ ಕಾರಣ ಉಲ್ಲೇಖಿಸಿ ರಿಟ್ ಪಿಟೀಷನ್ ಸಲ್ಲಿಸಿದ್ದರು.
ಬೆಂಗಳೂರಿನ ಹಿರಿಯ ನ್ಯಾಯವಾದಿ ಕೆ. ದಿವಾಕರ ನ್ಯಾಯವಾದಿಗಳಾದ ಎಂ ಎ ದಖನಿ ಹಾಗೂ ಎಸ್ ಎಸ್ ಮಮದಾಪೂರ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದರು. ಚುನಾವಣಾ ಆಯೋಗದ ಹಾಗೂ ವಿಜಯಪುರ ಮಹಾನಗರ ಪಾಲಿಕೆಯ ಪರವಾಗಿ ನ್ಯಾಯವಾದಿ ಅಮರೇಶ ರೋಝಾ ವಾದ ಮಂಡಿಸಿದ್ದರು.
ರಾಜ್ಯ ಅಡ್ವೊಕೇಟ್ ಹಾಜರು : ಮಹತ್ವದ ಪ್ರಕರಣವಾದ ಕಾರಣ ನಿನ್ನೆ ವಿಚಾರಣೆಗೆ ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಇಂದು ಅಂತಿಮ ತೀರ್ಪು ಪ್ರಕಟವಾಗಿದ್ದು ಮಹಾನಗರ ಪಾಲಿಕೆ ಚುನಾವಣೆ ಉಂಟಾಗಿದ್ದ ಆತಂಕ ನಿವಾರಣೆಯಾಗಿದೆ.
ಇದನ್ನೂ ಓದಿ : ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ವಾರ್ಡ್ಗಳ ಮೀಸಲಾತಿ ಪಟ್ಟಿ ಪ್ರಕಟ