ವಿಜಯಪುರ: ನೀರಿನ ಗಾಂಧಿ ಎಂದೇ ಖ್ಯಾತರಾದ ರಾಜೇಂದ್ರ ಸಿಂಗ್ ಅವರ ತರುಣ್ ಭಾರತ್ ಸಂಘ್ ಆಶ್ರಮದಿಂದ ನೀಡಲಾಗುವ ಪರ್ಯಾವರಣ ರಕ್ಷಕ ಪ್ರಶಸ್ತಿಯನ್ನು ಕರ್ನಾಟಕದ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರಿಗೆ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಬಿಕಾಂಪುರ ಆಶ್ರಮದಲ್ಲಿ ಪ್ರದಾನ ಮಾಡಲಾಯಿತು.
ಮಹಾತ್ಮಾ ಗಾಂಧಿಯವರ ಮೊಮ್ಮಗ ಅರುಣ ಗಾಂಧಿ, ಮರಿಮೊಮ್ಮಗ ತುಷಾರ್ ಗಾಂಧಿ, ಗಂಗಾ ನದಿ ಸ್ವಚ್ಚತೆಗಾಗಿ ಆಂದೋಲನ ನಡೆಸಿರುವ ಶಿವಾನಂದ ಭಾರತಿ ಸ್ವಾಮೀಜಿ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ವಿಜಯಪುರ ಜಿಲ್ಲೆ ರಾಜಸ್ಥಾನದ ಜೈಸಲ್ಮೇರ್ ನಂತರ ಅತೀ ಹೆಚ್ಚು ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯಾಗಿತ್ತು. ನಾನು ಜಲಸಂಪನ್ಮೂಲ ಸಚಿವನಾಗಿದ್ದ 5 ವರ್ಷಗಳ ಅವಧಿಯಲ್ಲಿ ಕೈಗೊಂಡ ವಿವಿಧ ಯೋಜನೆಗಳಿಂದ ಬರದ ಜಿಲ್ಲೆ ಹಣೆಪಟ್ಟಿ ಕಳಚಿ ಹಸಿರು ಜಿಲ್ಲೆಯಾಗುವತ್ತ ಮುನ್ನಡೆದಿದೆ. ಆದಿಲ್ಶಾಹಿ ಅರಸರ ಕಾಲದಲ್ಲಿ ನಿರ್ಮಿಸಿದ್ದ ಕೆರೆ, ಕಟ್ಟೆಗಳು ನೂರಾರು ವರ್ಷಗಳ ಕಾಲ ನೀರಿಲ್ಲದೇ ಒಣಗಿ ನಿಂತಿದ್ದವು. ಅವುಗಳಿಗೆ ಕಾಯಕಲ್ಪ ನೀಡಿ, ಪುನರುಜ್ಜೀವನ ಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೆರೆಗಳು ತುಂಬಿಸುವುದಲ್ಲದೇ 200 ಹಳ್ಳಗಳಿಗೆ ನೀರು ಹರಿಸಿ, ಅಲ್ಲಲ್ಲಿ ಚೆಕ್ಡ್ಯಾಂ ನಿರ್ಮಿಸಿ, ಇಂಗು ಬಾವಿಗಳನ್ನು ತೋಡಿ, ಅಂತರ್ಜಲ ವೃದ್ಧಿಗೆ ಕ್ರಮಜರುಗಿಸಲಾಗುತ್ತಿದ್ದು, 2021ರ ಮಧ್ಯ ಭಾಗದ ಹೊತ್ತಿಗೆ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಶ್ರಮದ ಅಧ್ಯಕ್ಷ ಡಾ.ರಾಜೇಂದ್ರ ಸಿಂಗ್ ಎಂ.ಬಿ. ಪಾಟೀಲ್ ಈ ರಾಷ್ಟ್ರ ಕಂಡ ಅಪರೂಪದ ನೀರಾವರಿ ಸಚಿವರು. ಅಂತರ್ ರಾಜ್ಯ ನದಿ ವಿವಾದಗಳನ್ನು ಬಗೆ ಹರಿಸಲು ಇವರು ತೆಗೆದುಕೊಂಡ ಕ್ರಮ ಉಳಿದ ನೀರಾವರಿ ಸಚಿವರಿಗೆ ಮಾದರಿಯಾಗಿದೆ. ಸಾಮಾಜಿಕ ಹೋರಾಟಗಾರರು, ಆಂದೋಲನ ಮಾಡುವ ಕಾರ್ಯವನ್ನು ಸರ್ಕಾರದಲ್ಲಿ ಸಚಿವರಾಗಿದ್ದುಕೊಂಡು ಇವರು ಮಾಡಿದ್ದಾರೆ ಎಂದು ಪ್ರಶಂಸಿದರು.
ಅಖಿಲಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ ಪ್ರಕಾಶ, ಭಕ್ತ ಚರಣದಾಸ ಸೇರಿದಂತೆ ವಿವಿಧ ರಾಷ್ಟ್ರಗಳ, ರಾಜ್ಯದ ನೂರಾರು ಜಲತಜ್ಞರು, ಸೇವಾಸಂಸ್ಥೆಗಳ ಪ್ರತಿನಿಧಿಗಳು, ರಾಷ್ಟ್ರದಲ್ಲಿ ಪರಿಸರ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.