ಮುದ್ದೇಬಿಹಾಳ (ವಿಜಯಪುರ) : ಕೊರೊನಾ ವೈರಸ್ ಹಾವಳಿಗೆ ಕಳೆದ ಎರಡೂವರೆ ತಿಂಗಳ ಕಾಲ ಲಾಕ್ಡೌನ್ನಿಂದ ಕೆಲಸವಿಲ್ಲದೇ ಪರದಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ.
ತಾಲೂಕಿನ ಹಿರೇಮುರಾಳ ಗ್ರಾ.ಪಂ ವ್ಯಾಪ್ತಿಯ ನೆರಬೆಂಚಿ ಗ್ರಾಮದಲ್ಲಿ ಪಂಚಾಯಿತಿ ಅಧಿಕಾರಿಗಳು ಬಾಂದಾರ ಹೂಳು ಎತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರಿಂದ ಹಲವಾರು ಕಾರ್ಮಿಕರಿಗೆ ಕೆಲಸ ದೊರೆತಂತಾಗಿದೆ. ಇದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಲಾಕ್ಡೌನ್ನಿಂದ ಕೆಲಸವಿಲ್ಲದೇ ಚಿಂತಾಕ್ರಾಂತರಾಗಿದ್ದ ಕೂಲಿಕಾರ್ಮಿಕರಿಗೆ ಪಂಚಾಯಿತಿ ಅಧಿಕಾರಿಗಳು ಕರೆದು ಕೆಲಸ ಕೊಟ್ಟಿದ್ದಾರೆ. ಇದರಿಂದಾಗಿ ನೆರಬೆಂಚಿ ಗ್ರಾಮದ ಸುತ್ತಮುತ್ತ ಬರುವ ಹೊಲಗಳಲ್ಲಿ ಕಿರು ಬಾವಿಗಳನ್ನು ತೆಗೆಯಲಾಗುತ್ತಿದ್ದು, ಇದರಿಂದ ಅಂತರ್ಜಲ ಮಟ್ಟ ಭವಿಷ್ಯದಲ್ಲಿ ಹೆಚ್ಚಳಗೊಂಡು ರೈತರಿಗೆ ಅನುಕೂಲವಾಗಲಿದೆ.
ಮುದ್ದೇಬಿಹಾಳ ತಾ.ಪಂ ಇಒ ಶಶಿಕಾಂತ ಶಿವಪೂರೆ ಮಾರ್ಗದರ್ಶನದಲ್ಲಿ ಗ್ರಾ.ಪಂ ಅಧ್ಯಕ್ಷ ಬಸವರಾಜ ಚಲವಾದಿ, ಹಿರೇಮುರಾಳ ಗ್ರಾ ಪಂ ಪಿಡಿಒ ಸಂಗಯ್ಯ ಹಿರೇಮಠ, ತಾ.ಪಂ ಯೋಜನಾಧಿಕಾರಿ ಪಿ.ಕೆ.ದೇಸಾಯಿ, ತಾಂತ್ರಿಕ ಅಭಿಯಂತರ ಶಿವಾನಂದ ಹಂಚಿನಾಳ, ಶಂಕರಗೌಡ ಪಾಟೀಲ ಮೊದಲಾದವರು ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದ್ದಾರೆ.