ಮೈಸೂರು: ಯುವಕರ ಸಂಭ್ರಮ ಎಂದೇ ಹೇಳಲಾಗುವ ಯುವ ಸಂಭ್ರಮವು ದಸರಾ ಮಹೋತ್ಸವದ ಮೊದಲ ಅದ್ಧೂರಿ ಕಾರ್ಯಕ್ರಮ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಮನವಿ ಮಾಡಿದರು.
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ, ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಯುವಸಂಭ್ರಮದಲ್ಲಿ ಭಾಗವಹಿಸಬೇಕೆಂದು ರಾಜ್ಯದ 470 ಕಾಲೇಜುಗಳಿಂದ ಯುವ ಪ್ರತಿಭೆಗಳು ಅರ್ಜಿ ಸಲ್ಲಿಸಿದ್ದು, 150 ಕಾಲೇಜುಗಳು ಆಯ್ಕೆಯಾಗಿ 120 ಕಾಲೇಜುಗಳನ್ನು ಕೈ ಬಿಡಲಾಗಿತ್ತು. ಆದರೆ, ಯಾವುದೇ ಪ್ರತಿಭೆಗಳಿಗೆ ಮೋಸವಾಗಬಾರದು ಎಂಬ ಕಾರಣದಿಂದ ಯುವ ಸಂಭ್ರಮವನ್ನು ಒಂದು ದಿನ ಹೆಚ್ಚು ಮಾಡಿ ಅವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
![Actor Sri Murali Green Signal To Yuva Dasara 2024](https://etvbharatimages.akamaized.net/etvbharat/prod-images/24-09-2024/kn-mys-04-yuvasambrama-vis-ka10003_24092024222652_2409f_1727197012_459.jpg)
ಯುವಸಂಭ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ನಡೆಯಲಿದ್ದು, ಅಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ನೋಡಬೇಕು. ಕಾರ್ಯಕ್ರಮ ನೀಡಲು ಬಂದಿರುವಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರಲ್ಲಿ ಇನ್ನು ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದು ಹೇಳಿದರು.
![Actor Sri Murali Green Signal To Yuva Dasara 2024](https://etvbharatimages.akamaized.net/etvbharat/prod-images/24-09-2024/kn-mys-04-yuvasambrama-vis-ka10003_24092024222652_2409f_1727197012_653.jpg)
ಸಂಸ್ಕೃತಿಯಲ್ಲಿ ಧರ್ಮ ಒಂದು ಭಗವಾಗಿದ್ದು, ಧರ್ಮವೇ ಸಂಸ್ಕೃತಿಯಲ್ಲ. ಎಲ್ಲ ಯುವ ಪೀಳಿಗೆಗಳು ಇದನ್ನು ಅರಿತು ಎಲ್ಲರಿಗೂ ಸಮಾನತೆಯನ್ನು ತಂದುಕೊಟ್ಟಿರುವ ಸಂವಿಧಾನದ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ಬ್ರಾತೃತ್ವವನ್ನು ಬೆಳೆಸಬೇಕು ಎಂದು ಹೇಳಿದರು.
![Actor Sri Murali Green Signal To Yuva Dasara 2024](https://etvbharatimages.akamaized.net/etvbharat/prod-images/24-09-2024/kn-mys-04-yuvasambrama-vis-ka10003_24092024222652_2409f_1727197012_300.jpg)
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹರೀಶ್ ಗೌಡ, ದಸರಾ ಮಹೋತ್ಸವದ ಮೊದಲನೇ ಕಾರ್ಯಕ್ರಮವಾದ ಯುವಸಂಭ್ರಮವು ಯುವಕರಿಗೆ ರಸದೌತಣವಾಗಿದೆ. ಈ ಕಾರ್ಯಕ್ರಮವನ್ನು ವಿಜೃಂಭಣೆಯಾಗಿ ಮಾಡಲು ಸರ್ಕಾರ ಕಾರಣವಾಗಿದ್ದು, ಅತಿ ಹೆಚ್ಚು ಅನುದಾನವನ್ನು ನೀಡಿ ದಸರಾ ಆಚರಣೆಯ ಯುವಸಂಭ್ರಮದಲ್ಲಿ ಅವಿಸ್ಮರಣೀಯವಾಗಿರುವ ಕಾರ್ಯಕ್ರಮಗಳನ್ನು ನೀಡುವಂತೆ ಸೂಚನೆ ನೀಡಿದ್ದರು. ಇಂದು ಅದು ಯಾವುದೇ ಅಡೆತಡೆ ಇಲ್ಲದೇ ನೆರವೇರಿದೆ ಎಂದರು.
ಚಿತ್ರ ನಟ ಶ್ರೀಮುರುಳಿ ಮಾತನಾಡಿ, ದಸರಾ ಎಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು. ದಸರಾ ಬಂತೆಂದರೆ ಇಲ್ಲಿನ ಜನರು ಹಾಗೂ ಮೈಸೂರಿನ ಆಡಂಬರವನ್ನು ನೋಡಲು ಎರಡು ಕಣ್ಣು ಸಾಲದು. ಇಂತಹ ಅದ್ಬುತ ದೃಶ್ಯಗಳು ಪ್ರಪಂಚದಲ್ಲಿ ಎಲ್ಲೋಯೂ ನೋಡಲು ಸಿಗುವುದಿಲ್ಲ ಎಂದರು.
![Actor Sri Murali Green Signal To Yuva Dasara 2024](https://etvbharatimages.akamaized.net/etvbharat/prod-images/24-09-2024/kn-mys-04-yuvasambrama-vis-ka10003_24092024222652_2409f_1727197012_855.jpg)
ನಮ್ಮ ನಾಡಹಬ್ಬವನ್ನು ತಲಾತಲಾತರಗಳಿಂದ ಬೆಳೆಸಿಕೊಂಡು ಬಂದು, ಇಂದಿಗೂ ಅದೇ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂಸದ ಸಂಗತಿ. ನಾವು ಇದರಲ್ಲಿ ಪಾಲ್ಗೊಂಡಿರುವುದು ಹೆಚ್ಚಿನ ಖುಷಿ ನೀಡಿದೆ. ಕರ್ನಾಟಕದ ಹೆಮ್ಮೆಯಾಗಿರುವ ದಸರಾವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಿ ಯಶಸ್ವಿಗೊಳಿಸೋಣ ಎಂದರು.
![Actor Sri Murali Green Signal To Yuva Dasara 2024](https://etvbharatimages.akamaized.net/etvbharat/prod-images/24-09-2024/kn-mys-04-yuvasambrama-vis-ka10003_24092024222652_2409f_1727197012_761.jpg)
ನಟಿ ರುಕ್ಮಿಣಿ ವಸಂತ್ ಮಾತನಾಡಿ, ವಿಶ್ವ ವಿಖ್ಯಾತ ನಾಡಹಬ್ಬದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು ಜನತೆ ಯಾವಾಗಲು ನಮ್ಮ ಮೇಲೆ ಚಿತ್ರ ರಂಗದ ಮೇಲೆ ಇಟ್ಟಿರುವ ಪ್ರೀತಿಗೆ ಎಂದಿಗೂ ಚಿರಋಣಿ ಎಂದು ಹೇಳಿದರು.
![Actor Sri Murali Green Signal To Yuva Dasara 2024](https://etvbharatimages.akamaized.net/etvbharat/prod-images/24-09-2024/kn-mys-04-yuvasambrama-vis-ka10003_24092024222652_2409f_1727197012_51.jpg)
ಇದನ್ನೂ ಓದಿ: ಮೈಸೂರು ದಸರಾ ದೀಪಾಲಂಕಾರದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಶೋ - Mysuru Dasara Drone Show