ಮುದ್ದೇಬಿಹಾಳ : ದೇಶಭಕ್ತಿಯ ನೆನಪು ಮತ್ತು ವೀರ ಯೋಧರ ಬಗ್ಗೆ ಅಭಿಮಾನ ಸಾರಬೇಕಾಗಿದ್ದ ಹುತಾತ್ಮ ಯೋಧರ ಸ್ಮಾರಕ ಸ್ಥಳೀಯ ಆಡಳಿತದ ನಿರ್ಲಕ್ಷ್ಯ, ಜನರ ಅಸಡ್ಡೆ ಹಾಗೂ ತಿಳುವಳಿಕೆ ಇಲ್ಲದ ಕಾರಣದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ.
ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಮೈದಾನಕ್ಕೆ ಸೈನಿಕ ಮೈದಾನ ಎಂದು ನಾಮಕರಣ ಮಾಡಿ, ಇಲ್ಲಿ ಯೋಧರಿಗೆ ಗೌರವಾರ್ಪಣೆಯ ಸಲುವಾಗಿ 21 ವರ್ಷಗಳ ಹಿಂದೆ ಭಾರತ-ಪಾಕ್ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವಪ್ಪಿದ ಮುದ್ದೇಬಿಹಾಳದ ಯೋಧ ದಾವಲಸಾಬ್ ಕಂಬಾರ ಇವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲಾಗಿದೆ.
ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿರುವ 'ಆಪರೇಶನ್ ವಿಜಯ' ಸ್ಮಾರಕವನ್ನು ಹೋಲುವ ಸ್ಮಾರಕವನ್ನು ವಿವಿಧ ದಾನಿಗಳ ನೆರವಿನಿಂದ ಇಲ್ಲಿನ ಕಾರ್ಗಿಲ್ ವೀರ ಯೋಧರ ಸ್ಮಾರಕ ನಿರ್ಮಾಣ ಸಮಿತಿಯಿಂದ ಕಟ್ಟಿಸಲಾಗಿದೆ. ಇದರಲ್ಲಿ ವೀರ ಯೋಧ ದಾವಲಸಾಬ್ ಕಂಬಾರರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ.
ಈ ಮೈದಾನದಲ್ಲಿ ಕಳೆದ 20 ವರ್ಷಗಳಿಂದ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ಕೂಡ ಆಚರಿಸುತ್ತಾ ಬರುತ್ತಿದೆ. ಆ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ದೇಶ ಭಕ್ತಿಯನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ.
ದಾವಲಸಾಬ್ ಕಂಬಾರರ ಬಗ್ಗೆ : ಭಾರತ ಹಾಗೂ ಪಾಕಿಸ್ತಾನ ಮಧ್ಯೆ 1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದ ಬಿಎಸ್ಎಫ್ ಯೋಧ ದಾವಲಸಾಬ್ ಅಲ್ಲಿಸಾಬ ಕಂಬಾರ(ನದಾಫ) ಹೆಸರು ಚಿರಸ್ಥಾಯಿಯಾಗಿದೆ. ಇವರು 1992ರಲ್ಲಿ ಸೈನ್ಯದಲ್ಲಿ ಸೇವೆಗೆ ಸೇರಿದ್ದರು. ಎಂಟು ವರ್ಷದ ಬಳಿಕ ಕಾರ್ಗಿಲ್ನಲ್ಲಿ ನಡೆದ ಕದನದಲ್ಲಿ ಪಾಕಿಸ್ತಾನದ ಮೂವರು ಸೈನಿಕರನ್ನು ಹೊಡೆದುರುಳಿಸಿ ಗುಂಡೇಟಿಗೆ ಬಲಿಯಾದರು. ಇಡೀ ಊರಿನ ಜನರು ತಮ್ಮ ಸಹೋದರನ ಸಾಧನೆ ಕೊಂಡಾಡುವಂತೆ ಮಾಡಿದ್ದು, ಸ್ಮರಿಸುವಂತಾಗಿದೆ ಎಂದು ಅವರ ಸಹೋದರ ಲಾಡಸಾಬ್ ಕಂಬಾರ ತಿಳಿಸುತ್ತಾರೆ.
ಮನೆ ಹಾಗೂ ಅಂಗಡಿಗೂ ಕಾರ್ಗಿಲ್ ಹೆಸರು : ಮುದ್ದೇಬಿಹಾಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿರುವ ಅಟೋಮೊಬೈಲ್ಸ್ ಅಂಗಡಿಗೆ ಕಾರ್ಗಿಲ್ ಆಟೋಮೊಬೈಲ್ ಎಂದು ಹೆಸರಿಡಲಾಗಿದೆ. ಮನೆಗೂ ಕೂಡಾ ಕಾರ್ಗಿಲ್ ಮಂಝಿಲ್ ಎಂದೇ ಹೆಸರಿಟ್ಟಿದ್ದಾರೆ. ಆಟೋಮೊಬೈಲ್ನಲ್ಲಿ ಹತ್ತು ಜನ ಕೆಲಸ ಮಾಡುತ್ತಿದ್ದಾರೆ. ಸೈನಿಕನ ಕುಟುಂಬ ನೆಮ್ಮದಿಯ ಜೀವನ ನಡೆಸುತ್ತಿದೆ.