ಮುದ್ದೇಬಿಹಾಳ (ವಿಜಯಪುರ): ಬಟ್ಟೆ ತೊಳೆಯಲೆಂದು ಬಾವಿಯೊಂದಕ್ಕೆ ಇಳಿದಿದ್ದ ಅಣ್ಣ ತಮ್ಮಂದಿರಿಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಪಟ್ಟಣದ ಆಶ್ರಯ ಕಾಲನಿಯ ಸಮೀಪದ ಬಾವಿಯಲ್ಲಿ ನಡೆದಿದೆ.
ಪಟ್ಟಣದ ಆಶ್ರಯ ಕಾಲನಿ ನಿವಾಸಿಗಳಾದ ಪ್ರೇಮು ಎಸ್ ಹಡಪದ(14), ಪುನೀತ ಎಸ್ ಹಡಪದ(10) ನೀರಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕರು.
ಮನೆಯಲ್ಲಿ ಸಹೋದರಿಯನ್ನು ಬಿಟ್ಟು ತಾವೇ ಬಟ್ಟೆ ತೊಳೆಯಲೆಂದು ನೀರಿಗೆ ಇಳಿದಿದ್ದಾರೆ. ಈ ವೇಳೆ, ಕಾಲು ಜಾರಿ ನೀರಲ್ಲಿ ಬಿದ್ದು ಮುಳುಗಿದ್ದಾರೆ. ಜನವಸತಿ ಪ್ರದೇಶದಿಂದ ಬಾವಿ ದೂರದಲ್ಲಿರುವ ಕಾರಣ ಮಕ್ಕಳು ಬಾವಿಗೆ ಬಿದ್ದಿರುವುದು ತಕ್ಷಣ ಗೊತ್ತಾಗಿಲ್ಲ. ಬಳಿಕ ಸ್ಥಳೀಯರೊಬ್ಬರು ಬಾವಿಯ ಸಮೀಪದಲ್ಲಿ ಮಕ್ಕಳ ಬಟ್ಟೆ ಕಂಡು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆಯ ಅಧಿಕಾರಿ ಪ್ರಮೋದ ಬಿ.ಎಸ್.ನೇತೃತ್ವದ ತಂಡ ಇಬ್ಬರು ಬಾಲಕರ ದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ,ಪಿಎಸ್ಐ ಎಂ.ಬಿ.ಬಿರಾದಾರ ಭೇಟಿ ನೀಡಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.