ಕಾರವಾರ: ರೈತರ ಪಾಲಿಗೆ ಬಹುದೊಡ್ಡ ಹಬ್ಬ ಅಂದ್ರೆ ಅದು ದೀಪಾವಳಿ. ಮೂರು ದಿನಗಳ ಕಾಲ ಬಲೀಂದ್ರನನ್ನು ತಂದು ಪೂಜೆ ಸಲ್ಲಿಸುವುದರ ಜತೆಗೆ ರೈತರ ಓಡನಾಡಿ ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಇಂತಹ ಹಬ್ಬ ಅನಿವಾರ್ಯ ಕಾರಣದಿಂದ ನಿಂತಾಗ ಹಬ್ಬ ಬಿಡಬಾರದು ಎಂಬ ಉದ್ದೇಶದಿಂದ ಹುಣ್ಣಿಮೆ ಆಚರಿಸುವ ಸಂಪ್ರದಾಯ ಜಿಲ್ಲೆಯಲ್ಲಿದ್ದು, ಅದರಂತೆ ಕುಮಟಾ ತಾಲೂಕಿನ ಕುಗ್ರಾಮವೊಂದರಲ್ಲಿ ದೀಪಾವಳಿಯನ್ನು ಇಂದು ಸಡಗರದಿಂದ ಆಚರಿಸಲಾಯಿತು.
ಹೌದು, ಕುಮಟಾ ತಾಲೂಕಿನ ಮೇದಿನಿ ಗ್ರಾಮದಲ್ಲಿ ಈ ಹಿಂದೆ ಅನಿವಾರ್ಯ ಕಾರಣದಿಂದ ದೀಪಾವಳಿ ಹಬ್ಬ ನಿಂತು ಹೋಗಿತ್ತು. ಆದರೆ ದೊಡ್ಡ ಹಬ್ಬವನ್ನು ಬಿಡಬಾರದು ಎಂಬ ಕಾರಣಕ್ಕೆ ಇಂತಹ ಸಂದರ್ಭಗಳಲ್ಲಿ ತಲತಲಾಂತರಗಳಿಂದ ನಡೆದುಕೊಂಡು ಬಂದಂತೆ ಹುಣ್ಣಿಮೆಯ ದಿನ ಹಬ್ಬ ಮಾಡುವ ಸಂಪ್ರದಾಯ ಈ ಭಾಗದಲ್ಲಿದೆ.
ಅದರಂತೆ ಕಳೆದ ಮೂರು ದಿನದಿಂದ ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲ್ಲಿಸಿದ ರೈತರು ಬಲಿಪಾಡ್ಯ ದಿನವಾದ ಇಂದು ಗೋವುಗಳಿಗೆ ಸಿಂಗಾರ, ರೊಟ್ಟಿ, ಪತೆ ತೆನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವುಗಳನ್ನು ಚೌಲು, ಬಲೂನ್, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು. ಈ ವೇಳೆ ಹೋರಿಗಳ ಓಟ, ಹಾರಾಟ, ರೈತರ ಸಂಭ್ರಮ ನೋಡುಗರ ಗಮನ ಸೆಳೆಯಿತು.