ಭಟ್ಕಳ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಗುರುವಂದನಾ ಸಮಿತಿ ಭಟ್ಕಳ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಕಮಲಾವತಿ ರಾಮನಾಥ್ ಶ್ಯಾನಭಾಗ ಕಲಾ ಮಂಟಪದಲ್ಲಿ ಶಿಕ್ಷಕರ ದಿನಾಚರಣೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ಭರತ್ ಕೆ. ಕೋವಿಡ್ನಿಂದಾಗಿ ಸರ್ಕಾರದ ಆದೇಶದಂತೆ ಈ ವರ್ಷ ಸರಳವಾಗಿ ನಡೆಸಿದ್ದೇವೆ. ಆದಷ್ಟು ಬೇಗ ನಿಯಂತ್ರಿಸಿ ಮುಂದಿನ ವರ್ಷ ಸಂಭ್ರಮದಿಂದ ಆಚರಿಸುವಂತಾಗಲಿ. ಹಾಗೂ ಕೋವಿಡ್ನಿಂದಾಗಿ ಶಿಕ್ಷಕರು ತಮ್ಮ ಶಿಕ್ಷಣ ಪದ್ಧತಿಯನ್ನು ಬದಲಿಸಿ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕೋವಿಡ್ ನಿಯಂತ್ರಣದಲ್ಲಿಯೂ ಸಹ ಸಮೀಕ್ಷೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರೆಲ್ಲರಿಗೂ ಧನ್ಯವಾದ ತಿಳಿಸಿದರು.
ನಂತರ ಅಧ್ಯಕ್ಷತೆ ವಹಿಸಿದ ತಾಲೂಕು ಪಂಚಾಯತ್ ಸದಸ್ಯ ವಿಷ್ಣು ದೇವಾಡಿಗ ಮಾತನಾಡಿ, ಶಿಕ್ಷಕರು ನವ ಭಾರತದ ಶಿಲ್ಪಿಗಳು. ಎಲ್ಲಾ ವರ್ಗದ ಜನರು ಇವರಿಂದಲೇ ವಿದ್ಯೆ ಕಲಿತಿರುವುದನ್ನು ಮರೆಯುವಂತಿಲ್ಲ. ರಾಷ್ಟ್ರ ನಿರ್ಮಾಣದಲ್ಲಿ ಇವರ ಪಾತ್ರ ಅತ್ಯಂತ ಅಮೂಲ್ಯವಾಗಿರುತ್ತದೆ. ಕೋವಿಡ್ ಸಂದರ್ಭದಲ್ಲಿ ಹಳ್ಳಿಗಳಲ್ಲಿನ ಶಾಲೆಗೆ ಶಿಕ್ಷಕರು ತೆರಳಿ ವಿದ್ಯೆ ನೀಡುತ್ತಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ 8-10 ವಿದ್ಯಾರ್ಥಿಗಳನ್ನು ಸೇರಿಸಿ ಶಿಕ್ಷಣ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ತಾಲೂಕಿನ ವಿವಿಧ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವರಿಸಾಲಾಗಿದ್ದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಎಸ್. ರವಿಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೇರ ಮುಂತಾದವರು ಉಪಸ್ಥಿತರಿದ್ದರು.