ಕಾರವಾರ: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಸ್ಮರಣೆಗಾಗಿ ಅಕ್ಕಸಾಲಿಗರೋರ್ವರು ಕೆತ್ತಿದ ಅಮರ್ ಜವಾನ್ ಜ್ಯೋತಿ ಮತ್ತು ರಾಷ್ಟ್ರಧ್ವಜದ ಪ್ರತಿಕೃತಿ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ.

ಹೊನ್ನಾವರದ ಪ್ರಸನ್ನ ಶೇಟ್ ಕಳೆದ ಕೆಲ ದಿನಗಳ ಹಿಂದೆ 53 ಮಿಲಿ ಗ್ರಾಂ ಚಿನ್ನದಲ್ಲಿ ಒಂದು ಸೆ.ಮೀ. ಅಮರ್ ಜವಾನ್ ಜ್ಯೋತಿ ಹಾಗೂ 520 ಮಿಲಿ ಗ್ರಾಂ ಬೆಳ್ಳಿಯಿಂದ ಬೇಸ್ ರೂಪಿಸಿದ್ದರು. ಪ್ರಮುಖವಾಗಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥ ಅತಿ ಕಡಿಮೆ ಚಿನ್ನ ಮತ್ತು ಬೆಳ್ಳಿ ಬಳಸಿ ನಿರ್ಮಿಸುವ ಮೂಲಕ ವಿಶೇಷವಾಗಿ ಯೋಧರಿಗೆ ನಮನ ಸಲ್ಲಿಸಿದ್ದಾರೆ.
ಅಲ್ಲದೆ, ಈ ಬಗ್ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೂ ಅರ್ಜಿ ಸಲ್ಲಿಸಿದ್ದರು. ನಿನ್ನೆ ಸರ್ಟಿಫಿಕೇಟ್ ಹಾಗೂ ಪದಕವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ನಿಂದ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಸನ್ನ ಶೇಟ್, ಇದು ನನಗೆ ತುಂಬಾ ಖುಷಿ ನೀಡಿದೆ ಎಂದಿದ್ದಾರೆ.

ಪ್ರಸನ್ನ ಅಕ್ಕಸಾಲಿಗರಾದರು ವೃತ್ತಿಯಲ್ಲಿ ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಸಿಸುತ್ತಿದ್ದಾರೆ. ಆಭರಣ ತಯಾರಿಸುವುದನ್ನು ಹವ್ಯಾಸ ಮಾಡಿಕೊಂಡಿರುವ ಇವರು, ಈ ಹಿಂದೆ ಚಿನ್ನದಲ್ಲಿ ಮಿನಿ ವಿಶ್ವಕಪ್ ರಚಿಸಿ ಗಮನ ಸೆಳೆದಿದ್ದರು.