ಶಿರಸಿ: ರಾಜ್ಯದಲ್ಲಿ ಹೊಸ ಜಿಲ್ಲೆಗಳ ರಚನೆ ಕುರಿತು ಹೋರಾಟ ನಡೆಯುತ್ತಿದೆ. ಬಳ್ಳಾರಿ ವಿಭಜನೆ, ಚಿಕ್ಕೊಡಿ, ಬೆಳಗಾವಿ ಗ್ರಾಮಾಂತರ ಹೊಸ ಜಿಲ್ಲೆ, ತುಮಕೂರು ವಿಭಜನೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯನ್ನೂ ಬೇರ್ಪಡಿಸಿ ಶಿರಸಿ ಜಿಲ್ಲೆಯನ್ನು ರಚನೆ ಮಾಡಬೇಕು ಎಂಬ ಆಗ್ರಹ ಹೆಚ್ಚಾಗಿದ್ದು, ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಇದರ ಮುಂದಾಳತ್ವ ವಹಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಅನರ್ಹ ಶಾಸಕರು ಮಹತ್ವದ ಪಾತ್ರ ವಹಿಸಿರುವ ಕಾರಣ ಬಿಜೆಪಿಯಲ್ಲಿ ಅವರ ಮಾತಿಗೆ ಹೆಚ್ಚಿನ ಬೆಲೆ ಇದೆ ಎನ್ನಲಾಗುತ್ತಿದೆ. ಇದರಿಂದ ಶಿರಸಿ ಜಿಲ್ಲೆ ಪ್ರಸ್ತಾವನೆ ಕುರಿತಾಗಿ ಜಿಲ್ಲೆಯ ಏಕೈಕ ಅನರ್ಹ ಶಾಸಕ ಹೆಬ್ಬಾರ್ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿ ಎಂಬ ಕೂಗು ಕೇಳಿ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ 6 ತಾಲೂಕುಗಳನ್ನು ಒಳಗೊಂಡು ಶಿರಸಿ ಜಿಲ್ಲೆ ರಚನೆ ಮಾಡಬೇಕು ಎನ್ನುವ ಒತ್ತಾಯ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಜನಪ್ರತಿನಿಧಿಗಳ ಅಸಹಕಾರದಿಂದ ಅದು ಕೇವಲ ಜನರ ಆಗ್ರಹವಾಗಿಯೇ ಉಳಿದಿದೆ. ಈಗ ವಿವಿಧ ಕಡೆಗಳಲ್ಲಿ ಹೊಸ ಜಿಲ್ಲೆಗಳ ರಚನೆ ಕೂಗು ಎದ್ದಿರುವ ಕಾರಣ ಶಿರಸಿ ಜಿಲ್ಲೆ ರಚನೆ ಮಾಡಬೇಕು ಎಂದು ಇಲ್ಲಿಯ ಜನರು ಬೇಡಿಕೆ ಮುಂದಿಟ್ಟಿದ್ದಾರೆ.
ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಶಿರಸಿ ಜಿಲ್ಲೆಯ ವ್ಯಾಪ್ತಿಗೆ ಬರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಎರಡು ಬಾರಿ ಇಲ್ಲಿಂದ ಶಾಸಕರಾಗಿದ್ದು, ಮುಂದಿನ ಉಪ ಚುನಾವಣೆಗೆ ಸ್ಪರ್ಧಿಸುವ ತಯಾರಿಯನ್ನೂ ನಡೆಸಿದ್ದಾರೆ. ಒಂದೊಮ್ಮೆ ಸುಪ್ರೀಂ ತೀರ್ಪು ಅವರ ಪರ ಬಂದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುವ ಎಲ್ಲಾ ಸಾಧ್ಯತೆಗಳಿದ್ದು, ಅವರು ಶಿರಸಿ ಜಿಲ್ಲೆ ರಚನೆಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.