ಶಿರಸಿ: ಅತೃಪ್ತ ಶಾಸಕರಲ್ಲಿ ಒಬ್ಬರಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಮುಂಬೈನಿಂದ ಮನೆಗೆ ವಾಪಸ್ ಆಗಿದ್ದಾರೆ. ಯಲ್ಲಾಪುರ ಪಟ್ಟಣದಲ್ಲಿರುವ ಸ್ವಂತ ಮನೆಗೆ ಬುಧವಾರ ಸಂಜೆಯ ವೇಳೆ ಆಗಮಿಸಿದ್ದಾರೆ.
ಮುಂಬೈನಿಂದ ನೇರವಾಗಿ ಮನೆಗೆ ಹಿಂತಿರುಗಿರುವುದು ಯಾರಿಗೂ ತಿಳಿಸದಂತೆ ಆಪ್ತರಿಗೆ ಶಾಸಕರು ಸೂಚಿಸಿದ್ದಾರೆ ಎನ್ನಲಾಗಿದೆ. ಮನೆಯ ಮುಂದಿನ ಗೇಟ್ಗೆ ಬೀಗ ಹಾಕಿ ಶಾಸಕರ ಭೇಟಿಗೆ ಸಂಜೆ ವೇಳೆ ಆಗಮಿಸಿದ್ದ ಯಾರೊಬ್ಬರಿಗೂ ಸೆಕ್ಯುರಿಟಿ ಅವಕಾಶ ನೀಡಿಲ್ಲ. ನಾಳೆ ಬೆಳಗ್ಗೆ ಬೆಂಗಳೂರಿಗೆ ತೆರಳುವುದಾಗಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಈಟಿವಿ ಭಾರತ ಪ್ರತಿನಿಧಿಗೆ ತಿಳಿಸಿದ್ದಾರೆ. ಹೆಚ್ಚಿನ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ.