ಬೆಂಗಳೂರು : ಲೀಸ್ ಹೆಸರಿನಲ್ಲಿ ಬಾಡಿಗೆದಾರರಿಗೆ ಹಾಗೂ ಬಾಡಿಗೆ ಹೆಸರಿನಲ್ಲಿ ಮನೆ ಮಾಲೀಕರಿಗೆ ವಂಚಿಸುತ್ತಿದ್ದ ಪ್ರಕರಣದ ಓರ್ವ ಆರೋಪಿಯನ್ನು ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಖಲೀಲ್ ಷರೀಫ್ ಬಂಧಿತ ಆರೋಪಿ. ಟಾಂಜನೈಟ್ ರಿಯಾಲ್ಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ಹಲವರಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿರುವ ಆರೋಪದಡಿ ಖಲೀಲ್ ಷರೀಫ್ ಹಾಗೂ ಸೈಯದ್ ಅಹಮದ್ ಹುಸೇನ್ ವಿರುದ್ಧ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಬಾಡಿಗೆಗೆ ಖಾಲಿಯಿರುವ ಮನೆ, ಫ್ಲ್ಯಾಟ್ಗಳ ವಿವರ ಪಡೆಯುತ್ತಿದ್ದ ಆರೋಪಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಮತ್ತಿತರ ವೇದಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದರು. ಜಾಹೀರಾತು ಗಮನಿಸಿ ಸಂಪರ್ಕಿಸುವವರಿಗೆ ಮೊದಲಿಗೆ ಮನೆ, ಫ್ಲ್ಯಾಟ್ಗಳನ್ನ ತೋರಿಸುತ್ತಿದ್ದ ಆರೋಪಿಗಳು, ಅವರು ಒಪ್ಪಿದ ಬಳಿಕ ಒಂದು ಅಥವಾ ಎರಡು ವರ್ಷಗಳಿಗೆ ಲೀಸ್ಗೆ ಅಗ್ರಿಮೆಂಟ್ ಮಾಡಿಕೊಂಡು ಹಣ ಪಡೆಯುತ್ತಿದ್ದರು. ಆದರೆ ಮನೆ/ಫ್ಲ್ಯಾಟ್ ಮಾಲೀಕರ ಬಳಿ ಆ ಅವಧಿಯಲ್ಲಿ ತಾವೇ ಬಾಡಿಗೆ ಪಾವತಿಸುವುದಾಗಿ ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದರು. ಆರಂಭದಲ್ಲಿ ಒಂದು ಅಥವಾ ಎರಡು ತಿಂಗಳು ಸರಿಯಾಗಿ ಬಾಡಿಗೆ ಪಾವತಿಸುತ್ತಿದ್ದ ಆರೋಪಿಗಳು ನಂತರ ಬಾಡಿಗೆ ಪಾವತಿಸುತ್ತಿರಲಿಲ್ಲ. ಕೊನೆಗೆ ಮನೆ/ಫ್ಲ್ಯಾಟ್ನ ಮಾಲೀಕರು ಲೀಸ್ಗೆ ವಾಸವಿದ್ದವರ ಬಳಿ ಬಾಡಿಗೆ ಕಟ್ಟುವಂತೆ ಕೇಳಲಾರಂಭಿಸುತ್ತಿದ್ದರು.
ಬಾಡಿಗೆದಾರರು, ಮನೆ ಮಾಲೀಕರು ಆರೋಪಿಗಳ ವಿಳಾಸದ ಬಳಿ ಹೋದಾಗ ವಂಚನೆಯ ಕುರಿತು ಬಯಲಾಗುತ್ತಿತ್ತು. ಆರೋಪಿಗಳ ವಿರುದ್ಧ ಕೊತ್ತನೂರು, ರಾಮಮೂರ್ತಿನಗರ, ದೇವನಹಳ್ಳಿ, ರಾಜಾನುಕುಂಟೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಪ್ರಕರಣದ ತನಿಖೆಯನ್ನ ಸಿಸಿಬಿಗೆ ವಹಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೂಚಿಸಿದ್ದರು. ಪ್ರತ್ಯೇಕವಾಗಿ ಪ್ರಕರಣದ ತನಿಖೆ ಆರಂಭಿಸಿದ್ದ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಸದ್ಯ ಖಲೀಲ್ ಷರೀಫ್ ಎಂಬಾತನನ್ನ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಸೈಯದ್ ಅಹಮದ್ ಹುಸೇನ್ಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ATM ಯಂತ್ರಗಳ ಬಳಿ ಸಹಾಯ ಕೇಳುವ ವೃದ್ಧರೇ ಇವರ ಟಾರ್ಗೆಟ್: ನಕಲಿ ಕಾರ್ಡ್ ಸ್ವೈಪ್ ಮಾಡಿ ವಂಚಿಸುತ್ತಿದ್ದ ಮೂವರ ಬಂಧನ
ಇದನ್ನೂ ಓದಿ: ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್ ಬುಕ್: ಅರ್ಚಕರಿಗೆ 1.60 ಲಕ್ಷ ರೂ. ವಂಚನೆ: ಎಫ್ಐಆರ್ ದಾಖಲು