ಶಿರಸಿ: ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದ ಟೋಲ್ ನಾಕಾ ಜನತ್ ನಗರದ ನಿವಾಸಿ ರಾಜೇಶ್ ವಿಠ್ಠಲ ನಾಯ್ಕ (38) ಬಂಧಿತ ಆರೋಪಿ. ಈತನಿಂದ ಎರಡು ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲಾಗಿದ್ದ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಕಳೆದ ಒಂದು ವಾರದ ಹಿಂದೆ ನಗರದ ರಾಯರಪೇಟೆ ಹತ್ತಿರದ ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೇಧಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಇದಲ್ಲದೇ ಆರೋಪಿತನು ಒಂದು ವಾರದ ಹಿಂದೆ ಸಾಗರದ ಗ್ರಾಮಿಣ ಠಾಣೆ ವ್ಯಾಪ್ತಿಯಲ್ಲಿ ಹಿರೋ ಹೋಂಡಾ ಬೈಕ್ ಕಳ್ಳತನ ಮಾಡಿದ್ದನಂತೆ. ಈ ಬೈಕ್ ಕೂಡಾ ಆರೋಪಿಯಿಂದ ವಶಪಡಿಸಿಕಳ್ಳಲಾಗಿದ್ದು, ಈತನ ವಿರುದ್ಧ ಮಂಗಳೂರು, ಉಡುಪಿ, ಧಾರವಾಡದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.