ಕಾರವಾರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿ ಗೌಡ ಅವರು ಪ್ರಶಸ್ತಿ ಸ್ವೀಕರಿಸಿ ಜಿಲ್ಲೆಗೆ ಆಗಮಿಸುತ್ತಿದ್ದಂತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದು ಸನ್ಮಾನಿಸಿ ಗೌರವಿಸಲಾಯಿತು.
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದರೂ ಕೂಡ ಸರ್ಕಾರದ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಸಹಕಾರ ಸಿಗದೆ ಅವರಿವರ ಸಹಕಾರದಲ್ಲಿ ದೆಹಲಿಗೆ ತೆರಳಿ ಪದ್ಮಶ್ರೀ ಸ್ವೀಕರಿಸುತ್ತಿರುವ ವಿಷಯ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿ ವರ್ಷ ಕಳೆದರೂ ಕೂಡ ಬಡತನದಲ್ಲಿರುವ ತುಳುಸಿ ಗೌಡ ಅವರಿಗೆ ದೆಹಲಿಗೆ ತೆರಳಲು ಸರ್ಕಾರ ಸೌಲಭ್ಯ ಒದಗಿಸದೇ ನಿರ್ಲಕ್ಷಿಸಲಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಈಟಿವಿ ಭಾರತ ಕೂಡ ವರದಿ ಮಾಡಿತ್ತು.
ಆದರೆ, ಇದೀಗ ಬೆಂಗಳೂರು, ಮಂಗಳೂರಿಗೆ ತೆರಳಿ ಭಾನುವಾರ ಜಿಲ್ಲೆಗೆ ಆಗಮಿಸಿದ್ದ ತುಳುಸಿ ಗೌಡ ಅವರನ್ನು ಸಂಪರ್ಕಿಸಿದ್ದ ಅಧಿಕಾರಿಗಳು ಜಿಲ್ಲಾಡಳಿತದಿಂದ ಸನ್ಮಾನ ಸ್ವೀಕರಿಸಲು ಆಗಮಿಸುವಂತೆ ವಿನಂತಿಸಿದ್ದರು. ಅದರಂತೆ ಸೋಮವಾರ ಆಗಮಿಸಿದ ತುಳಸಿ ಗೌಡ ಅವರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿದರು.
ಬಳಿಕ ಮಾತನಾಡಿದ ತುಳಸಿ ಗೌಡ, ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯಾಗಿದೆ. ದೆಹಲಿಗೆ ಹೋಗಿ ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡು ಬಂದಿದ್ದೇನೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಕೈ ಮುಗಿದು ನಾನು ಗಿಡ ಬೆಳಸುವ ಬಗ್ಗೆ ತಿಳಿಸಿದ್ದೇನೆ.
ಎಲ್ಲರೂ ಗಿಡಗಳನ್ನು ಬೆಳೆಸಬೇಕು. ಅದರಿಂದಲೇ ನಮಗೆ ಒಳ್ಳೆ ಗಾಳಿ, ಮಳೆ ಸಿಗುತ್ತದೆ. ನನ್ನ ಒಬ್ಬ ಮೊಮ್ಮಗನಿಗೆ ಕೆಲಸ ಇಲ್ಲ. ಅವನಿಗೆ ಒಂದು ಉದ್ಯೋಗ, ಒಂದು ಮನೆ ಹಾಗೂ ಬಾವಿ ಮಾಡಿ ಕೊಡುವಂತೆ ಇದೇ ವೇಳೆ ಅಧಿಕಾರಿಗಳ ಬಳಿ ಮನವಿ ಮಾಡಿದರು.