ಶಿರಸಿ: ಮೊಮ್ಮಗನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲಿ ತನಗೂ ಸೋಂಕು ಹರಡುತ್ತೋ ಎನ್ನುವ ಭಯದಲ್ಲಿ ವೃದ್ಧೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ದಾಂಡೇಲಿಯ ಲಕ್ಷ್ಮಿ (62) ಆತ್ಮಹತ್ಯೆ ಮಾಡಿಕೊಂಡ ವೃದ್ಧೆ. ಮೊನ್ನೆ ಈಕೆಯ ಮೊಮ್ಮಗನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇಬ್ಬರು ಅಜ್ಜಿ, ಸಹೋದರನ ಜೊತೆ ಸೋಂಕಿತ ವಾಸವಾಗಿದ್ದ. ಮೊಮ್ಮಗನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರು ಅಜ್ಜಿಯರು ಹಾಗೂ ಆತನ ಸಹೋದರರನ್ನು ದಾಂಡೇಲಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಎಲ್ಲಿ ತನಗೂ ಕೊರೊನಾ ಬರುತ್ತೋ ಎಂಬ ಭಯದಲ್ಲಿ ವೃದ್ಧೆ ಐಸೋಲೇಷನ್ ವಾರ್ಡ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.