ಕಾರವಾರ: ನಗರಸಭಾ ಕಾರ್ಯಾಲಯದಿಂದ ಏಪ್ರಿಲ್ 5 ರಂದು ಮತ್ತು ಮೇ 9 ರಂದು ಸುಮಾರು 171 ವಿವಿಧ ಕಾಮಗಾರಿಗಳಿಗಾಗಿ ಎರಡು ಟೆಂಡರ್ಗಳನ್ನು ಕರೆಯಲಾಗಿತ್ತು. ಆದರೇ ಟೆಂಡರ್ ಕರೆದಿರುವ ಕಾಮಗಾರಿಗಳು ಈಗಾಗಲೇ ಬಹುತೇಕ ಮುಗಿದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ನಗರಸಭೆ ಆಯುಕ್ತರು ನಿಯಮಬಾಹಿರವಾಗಿ ಕೆಲಸವನ್ನು ಮಾಡಿದ್ದಾರೆಂದು ಆರೋಪಿಸಿ ಮಾಜಿ ಶಾಸಕ ಸತೀಶ್ ಸೈಲ್ ಕಾರ್ಯಾಲಯದಲ್ಲಿ ಧರಣಿ ಕುಳಿತಿದ್ದಾರೆ.
ಈ ಕುರಿತು ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರದ ಕಾಮಗಾರಿ ಮಾಡೋದಾದ್ರೂ ಸಂಬಂಧಪಟ್ಟ ಇಲಾಖೆ ಮೊದಲು ಅಗತ್ಯ ಟೆಂಡರ್ ಕರೆಯಬೇಕು. ಆ ಬಳಿಕವೇ ಕಾಮಗಾರಿಯನ್ನು, ಟೆಂಡರ್ನಲ್ಲಿ ಪಡೆದವರಿಗೆ ನೀಡಬೇಕು. ಆದರೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಮೊದಲೇ ನೂರಾರು ಕಾಮಗಾರಿಗಳನ್ನು ನಡೆಸಿ ಬಳಿಕ ಟೆಂಡರ್ ಕರೆದಿದೆ. ಕೇವಲ ಕಾಟಾಚಾರಕ್ಕಾಗಿ ಟೆಂಡರ್ ಕರೆದು ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಮಾಡಲಾಗಿದೆ ಎಂದು ಕಾರವಾರ ಮಾಜಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರಸಭೆ ಆಯುಕ್ತರಾದ ಆರ್ ಪಿ ನಾಯ್ಕ, ಟೆಂಡರನ್ನು ನಿಯಮದನುಸಾರವಾಗಿಯೇ ಮಾಡಿದ್ದೇವೆ. ಈಗಾಗಲೇ ಮಾಡಿದ ಕಾಮಗಾರಿಯ ಹೆಚ್ಚುವರಿ ಕಾಮಗಾರಿಗೆ ಟೆಂಡರ್ ಕರೆದಿದ್ದೇವೆ. ತಮ್ಮಿಂದ ಯಾವುದೇ ಲೋಪವಾಗಿಲ್ಲ. ಬೇಕಾದಲ್ಲಿ ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಯಲ್ಲಿ ಲೋಪವಾಗಿದೆಯೆಂಬ ಅನುಮಾನ ಮೂಡಿದೆ. ಆದರೆ ಕಾಮಗಾರಿ ಮೊದಲೇ ಮಾಡಿಕೊಂಡು ಟೆಂಡರ್ ಕರೆದಿರೋದು ಅಧಿಕಾರಿಗಳ ಮೇಲಿನ ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ