ಕಾರವಾರ: ಗಂಗಾಮಾತೆಯು ಜಗದೀಶ್ವರನನ್ನು ವರಿಸುವ ಅದ್ದೂರಿ ವಿವಾಹಮಹೋತ್ಸವ ಇಂದು ಇತಿಹಾಸ ಪ್ರಸಿದ್ಧ ಕುಮಟಾ ತಾಲೂಕಿನ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನ ಸಮೀಪದ ಕಡಲತೀರದಲ್ಲಿ ಅದ್ದೂರಿಯಾಗಿ ಜರುಗಿತು.
ಗೋಕರ್ಣದ ಗಂಗೆಕೊಳ್ಳದಲ್ಲಿ ಗಂಗಾಷ್ಟಮಿಯ ಮುಂಜಾವಿನಲ್ಲಿ ನಿಶ್ಚಯವಾದಂತೆ ಶಿವಗಂಗಾ ವಿವಾಹ ಮಹೋತ್ಸವವು ಗೋಕರ್ಣ-ಗಂಗಾವಳಿ ನಡುವಿನ ಕಡಲತೀರದಲ್ಲಿ ಆಯೋಜಿಸಲಾಗಿತ್ತು. ಈ ದೇವದಂಪತಿ ವಿವಾಹ ಮಹೋತ್ಸವದಲ್ಲಿ ಊರಿಗೆ ಊರೆ ಸಂಭ್ರಮದಲ್ಲಿ ತೇಲಿತು. ಮುಖ್ಯ ಕಡಲತೀರದಿಂದ 5 ಕಿ. ಮೀ. ಗಂಗಾವಳಿ ಕಡಲತೀರದವರೆಗೆ ತಳಿರು ತೋರಣ, ವಿಶಿಷ್ಟ ಮಂಟಪಗಳಿಂದ ಶೃಂಗರಿಸಲಾಗಿತ್ತು. ಇದಲ್ಲದೆ ಹಾಲಕ್ಕಿ, ಒಕ್ಕಲಿಗೆ, ಗುಮಟೆ ಪಾಂಗ್ ಸಂಭ್ರಮದ ಎಲ್ಲೆ ಮೀರಿತ್ತು.
ಸೂರ್ಯ ಪಶ್ಚಿಮಮುಖವಾಗಿ ತೆರಳುತ್ತಿದ್ದಂತೆ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗಂಗಾಮಾತೆ ಜಗದೀಶ್ವರನನ್ನು ವರಿಸಿದಳು. ಕಡಲಿನ ಅಬ್ಬರ, ವಾದ್ಯಘೋಷ, ವೇದಘೋಷ, ವಿಶಿಷ್ಟ ತೋರಣ, ಜಾನಪದ ಹಾಡು ಉತ್ಸವದ ಮೆರಗನ್ನು ನೀಡಿದವು. ವಿವಾಹದ ನಂತರ ಉತ್ಸವವು ಭಕ್ತರು ಆರತಿ ನೀಡಿ ದೇವ ದಂಪತಿ ಬರಮಾಡಿಕೊಂಡರು.
ಬಳಿಕ ಅಮೃತಾನ್ನ ಭೋಜನ ಶಾಲೆಗೆ ಚಿತ್ತ್ಯೆಸಿದ ಉತ್ಸವ ಸುಂದರವಾಗಿ ಶೃಂಗಾರಗೊಂಡ ಮಂಟಪದಲ್ಲಿ ರಾಜೋಪಚಾರ ಪೂಜೆ ಸ್ವೀಕರಿಸಿ ದೇವಾಲಯಕ್ಕೆ ಆಗಮಿಸಿತು. ನಂತರ ಭಕ್ತಸಮೂಹ ದೇವ ದಂಪತಿಯ ವಿವಾಹಮಹೋತ್ಸವವನ್ನು ಕಣ್ ತುಂಬಿಕೊಂಡರು.
ಆಕಾಶದಲ್ಲಿ ಶಿವಗಂಗೆ ರೂಪ :ಇನ್ನು, ಸೂರ್ಯಾಸ್ತದ ಬಳಿಕ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ವಧುವಾಗಿ ಬಂದ ಗಂಗಾಮಾತೆ ಶಿವನನ್ನು ವಿವಾಹವಾಗುವ ವೇಳೆಗೆ ಮೋಡದಲ್ಲಿ ಶಿವಲಿಂಗ ರೂಪ ಮೂಡಿದ್ದು, ನೆರೆದಿದ್ದ ಭಕ್ತರಲ್ಲಿ ಅಚ್ಚರಿ ಮೂಡಿಸಿತ್ತು. ಅಲ್ಲದೆ ಇದನ್ನು ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.