ಕಾರವಾರ: ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಪ್ರಾರಂಭಕ್ಕೆ ಅನುಮತಿ ಸಿಕ್ಕಿದ್ದರೂ ಬಹುತೇಕ ಯಾಂತ್ರಿಕೃತ ಬೋಟುಗಳು ಬಂದರಿನಲ್ಲೆ ಲಂಗರು ಹಾಕಿವೆ. ಆದರೆ, ಎಂಡಿ ಬಲೆ ಮೂಲಕ ದಡದಿಂದಲೆ ಮೀನುಗಾರಿಕೆ ನಡೆಸುವ ಮೀನುಗಾರರ ಬಲೆಗೆ ಭರಪೂರ ಮೀನು ಬೇಟೆಯಾಗಿದ್ದು, ದುರದೃಷ್ಟವಶಾತ್ ಸೂಕ್ತ ಬೆಲೆಯಿಲ್ಲದೆ ಮೀನುಗಾರರು ನಿರಾಸೆಯಾಗಿದ್ದಾರೆ.
ಸಾಮಾನ್ಯವಾಗಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತಗೊಳ್ಳುವ ಜೂನ್, ಜುಲೈ ತಿಂಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮಾಡಲಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಮೀನುಗಳು ಮರಿ ಇಡುವ ಹಿನ್ನೆಲೆ ಕೇವಲ ದಡದ ಸಮೀಪದಲ್ಲಿ ಮೀನುಗಾರಿಕೆಗೆ ಅವಕಾಶವಿದ್ದು, ಈ ಸಂದರ್ಭದಲ್ಲಿ ಏಂಡಿ ಮೀನುಗಾರಿಕೆಯನ್ನು ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಚಂಡಮಾರುತ ಹಾಗೂ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ದಡ ಮೀನುಗಾರಿಕೆ ಮಾಡುವುದು ಸಾಧ್ಯವಿಲ್ಲದಂತಾಗಿತ್ತು.
ಕೊರೊನಾ ಎಫೆಕ್ಟ್:
ಇದೀಗ ಮೀನುಗಾರಿಕೆಗೆ ಅವಕಾಶ ನೀಡಿದ್ದರೂ ಯಾಂತ್ರಿಕ ಬೋಟುಗಳು ಡಿಸೇಲ್ ಬೆಲೆ ಏರಿಕೆ, ಕೊರೊನಾ ಸೇರಿ ಇನ್ನಿತರ ಕಾರಣದಿಂದ ಇನ್ನೂ ಕಡಲಿಗಿಳಿಯದ ಹಿನ್ನೆಲೆಯಲ್ಲಿ ದಡದಲ್ಲಿ ಏಂಡಿ ಬೀಸಿದ್ದ ಮೀನುಗಾರರಿಗೆ ಸಾಕಷ್ಟು ಪ್ರಮಾಣದಲ್ಲಿ ಸೀಗಡಿ ಸೇರಿದಂತೆ ರಾಶಿ ರಾಶಿ ಮೀನುಗಳು ಬಲೆಗೆ ಬಿದ್ದಿವೆ. ಒಂದೆಡೆ ಮೀನು ಸಿಕ್ಕಿರುವುದು ಖುಷಿಯ ವಿಚಾರವಾಗಿದ್ದರೂ ಮೀನುಗಳ ಖರೀದಿ ಮಾಡುವವರಿಲ್ಲದಿರುವುದು ಮೀನುಗಾರರಿಗೆ ಬೇಸರ ಮೂಡಿಸಿದೆ.
ಮೀನುಗಳ ಖರೀದಿಗೆ ಬಾರದ ಕಾರ್ಖಾನೆಗಳು:
ಕೊರೊನಾ ಅಬ್ಬರದಿಂದಾಗಿ ಕೇರಳ, ಗೋವಾ ಗಡಿಗಳು ಬಂದ್ ಆಗಿದ್ದು, ಸೀಗಡಿ ಮೀನು ಖರೀದಿಗೆ ಯಾವುದೇ ಕಂಪನಿಗಳೂ ಬರುತ್ತಿಲ್ಲ. ವಿದೇಶಗಳಿಗೆ ರಫ್ತಿಗೂ ಸಹ ಕೊರೊನಾ ಅಡ್ಡಿಯಾಗಿರುವುದರಿಂದ ಸೀಗಡಿ ಪ್ಯಾಕಿಂಗ್ ಮಾಡುತ್ತಿದ್ದ ಕಾರ್ಖಾನೆಗಳೂ ಸಹ ಖರೀದಿಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಕಳೆದ ಬಾರಿ ಕೆಜಿಗೆ 140 ರೂ.ಗೆ ಮಾರಾಟವಾಗುತ್ತಿದ್ದ ಸೀಗಡಿ ಮೀನಿಗೆ ಈ ಬಾರಿ ಕೆಜಿಗೆ ಕೇವಲ 70 ರಿಂದ 80 ರೂ ಬೆಲೆ ಇದೆ. ಇದರಿಂದಾಗಿ ಹೇರಳ ಪ್ರಮಾಣದಲ್ಲಿ ಸೀಗಡಿ ಲಭ್ಯವಾಗಿದ್ದರೂ ಅದನ್ನ ಮಾರಾಟ ಮಾಡಲಾಗದೇ ಮೀನುಗಾರರು ಪರದಾಡುವಂತಾಗಿದೆ.
ಸರ್ಕಾರದ ನೆರವಿಗೆ ಆಗ್ರಹ:
ಇನ್ನು ಕೊರೊನಾ ಅಬ್ಬರ ಸಹ ಮೀನುಗಾರಿಕೆ ಮೇಲೆ ಸಾಕಷ್ಟು ಹೊಡೆತ ನೀಡಿದ್ದು, ಮೀನುಗಾರಿಕೆ ನಡೆಸಲಾಗದೇ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಸರ್ಕಾರದ ನೀತಿಗಳಿಂದಾಗಿ ಡೀಸೆಲ್ ಸಹ ದುಬಾರಿಯಾಗಿದ್ದು, ಮೀನುಗಾರರಿಗೆ ಇದೀಗ ಸಬ್ಸಿಡಿ ಸಹ ಸಿಗುತ್ತಿಲ್ಲ. ಈ ಕಾರಣದಿಂದಾಗಿ ಇದುವರೆಗೂ ಸಹ ಯಾಂತ್ರಿಕ ಬೋಟುಗಳು ಮೀನುಗಾರಿಕೆಗೆ ಇಳಿದಿಲ್ಲವಾಗಿದ್ದು ಸರ್ಕಾರ ನೆರವು ನೀಡಬೇಕು ಅನ್ನೋದು ಮೀನುಗಾರರ ಆಗ್ರಹವಾಗಿದೆ.