ಕಾರವಾರ : ಹಿಜಾಬ್ ಕುರಿತು ವ್ಯತಿರಿಕ್ತ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಇಂದು ಸ್ವಯಂಪ್ರೇರಿತ ಬಂದ್ಗೆ ಕರೆಕೊಡಲಾಗಿದೆ.
ಈ ಹಿನ್ನೆಲೆ ಬೆಳಗ್ಗೆಯಿಂದಲೇ ಪಟ್ಟಣದ ಮುಸ್ಲಿಂ ವರ್ತಕರ ಅಂಗಡಿಗಳು ಬಂದ್ ಆಗಿವೆ. ಪಟ್ಟಣದ ಬೊಂಬಾಯ್ ಬಝಾರ್ ರೋಡ್, ಮೌಲಾನಾ ಆಜಾದ್ ರೋಡ್, ಮಾರಿಕಟ್ಟೆ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಣಿಜ್ಯ ವ್ಯವಹಾರದ ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ.
ನಿನ್ನೆ ಹಿಜಾಬ್ ತೀರ್ಪನ್ನ ಪ್ರಕಟಿಸುತ್ತಿದ್ದಂತೆ ಪಟ್ಟಣದ ಕೆಲ ಮುಸ್ಲಿಂ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನ ಬಂದ್ ಮಾಡಿದ್ದರು. ಇದಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಮುಸ್ಲಿಮರ ತಂಜೀಮ್ ಸಂಘಟನೆ, ಹೈಕೋರ್ಟ್ ತೀರ್ಪನ್ನ ಒಪ್ಪಲು ಸಾಧ್ಯವಿಲ್ಲ. ಹಿಜಾಬ್ ಧರಿಸುವಿಕೆ ಪ್ರಮುಖ ಆಚರಣೆಯಲ್ಲ ಎಂದು ಕೋರ್ಟ್ ತಿಳಿಸಿರುವುದು ನಮಗೆ ನೋವುಂಟು ಮಾಡಿದೆ.
ಹೀಗಾಗಿ, ಸ್ವಯಂಪ್ರೇರಿತರಾಗಿ ಭಟ್ಕಳ ಬಂದ್ ಮಾಡುವಂತೆ ಕರೆ ಕೊಟ್ಟಿದೆ. ಅದರಂತೆ ತಂಜೀಮ್ ಸಂಘಟನೆ ಮನವಿ ಮೇರೆಗೆ ಮುಸ್ಲಿಂ ವರ್ತಕರು ತಮ್ಮ ವ್ಯಾಪಾರವನ್ನ ಬಂದ್ ಮಾಡಿದ್ದಾರೆ. ಜಿಲ್ಲೆಯಲ್ಲಿ ನಿನ್ನೆಯಿಂದ ಮಾರ್ಚ್ 20ರವರೆಗೆ 5 ದಿನಗಳ ಕಾಲ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಮಾಡಿದ್ದಾರೆ.
ಹೀಗಾಗಿ, ಯಾವುದೇ ರೀತಿಯ ಪ್ರತಿಭಟನೆ, ಮೆರವಣಿಗೆಗಳಿಗೆ ಅವಕಾಶ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಭಟ್ಕಳ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನ ಮಾಡಲಾಗಿದೆ.
ಓದಿ: ಗೋಹತ್ಯೆ ತಡೆ ಕಾಯ್ದೆ ರಚಿಸಿದ ಬಿಜೆಪಿ ಸರ್ಕಾರ ಗೋ ಶಾಲೆಗಳ ಸ್ಥಾಪನೆಗೇಕೆ ಉತ್ಸಾಹ ತೋರುತ್ತಿಲ್ಲ?