ಕಾರವಾರ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಇದೀಗ ತಮ್ಮ ಸಂಕಷ್ಟಗಳ ನಿವಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ. ಮಂಗಳವಾರ ಪತ್ನಿ, ಪುತ್ರನೊಂದಿಗೆ ಗೋಕರ್ಣದ ಶ್ರೀ ಮಹಾಬಲೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇಂದು ಅಂಗಾರಕ ಸಂಕಷ್ಟಿ ಹಿನ್ನೆಲೆ ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿ ಸಂಕಷ್ಟ ನಿವಾರಣೆಗೆ ಪೂಜೆ ಸಲ್ಲಿಸಿದರು.
ನಂತರ ಮಹಾಬಲೇಶ್ವರ ದೇವರ ದರ್ಶನ ಪಡೆದು, ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಕುಟುಂಬದ ಜೊತೆ ಗೋಕರ್ಣಕ್ಕೆ ಆಗಮಿಸಿದ ಈಶ್ವರಪ್ಪನವರಿಗೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ. ಆದರೆ, ಗ್ರಾಮೀಣಾಭಿವೃದ್ಧಿ ಸಚಿವರಿದ್ದಾಗ ಕೋಟಿತೀರ್ಥ ಸ್ವಚ್ಛತೆಗೆ ಅನುದಾನ ನೀಡಿದ್ದ ಈಶ್ವರಪ್ಪ ಅವರು ಗೋಕರ್ಣಕ್ಕೆ ಆಗಮಿಸಿದ್ದರೂ, ಕೋಟಿತೀರ್ಥ ಕಾಮಗಾರಿ ವೀಕ್ಷಣೆಗೆ ತೆರಳದೆ ವಾಪಸ್ ಆಗಿದ್ದಾರೆ. ಖಾಸಗಿ ಭೇಟಿಯೆಂದು ಮಾಧ್ಯಮಗಳಿಗೂ ಪ್ರತಿಕ್ರಿಯಿಸಲು ನಿರಾಕರಣೆ ಮಾಡಿ, ಗೋಕರ್ಣದಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ಸಾವಿರ ಅಡಿ ಎತ್ತರದ ಬೆಟ್ಟದಿಂದ ಕೆಳಗೆ ಎಳೆಯುತ್ತಾರೆ ತೇರು: ಇದು ದೇಶದಲ್ಲಿಯೇ ಅಪರೂಪದ ರಥೋತ್ಸವ